ಫೈಟರ್ ಜಟ್ ಗಳ ಡಿಕ್ಕಿ ಪ್ರಕರಣ: ಪ್ರತಿಕ್ರಿಯೆ ನೀಡಲು ರಕ್ಷಣಾ ಸಚಿವೆ ನಕಾರ

ಬೆಂಗಳೂರು: 2 ಹಾಕ್ ಫೈಟರ್ ಜಟ್ ಗಳ ನಡುವೆ ಪರಸ್ಪರ ಡಿಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ತಾಲೀಮು ವೇಳೆ ಎರಡು ಸೂರ್ಯ ಕಿರಣ ಯುದ್ಧ ವಿಮಾನಗಳು ಡಿಕ್ಕಿಯಾಗಿ ಓರ್ವ ಪೈಲಟ್ ದುರ್ಮರಣ ಹೊಂದಿದ್ದು, ಇಬ್ಬರು ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಲು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನಿರಾಕರಿಸಿದ್ದಾರೆ.

ವಿಮಾನ ದುರಂತದ ವೇಳೆ ಬೆಂಗಳೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ರಕ್ಷಣಾ ಸಚಿವೆ ಘಟನೆ ಬಗ್ಗೆ ಏನನ್ನೂ ಹೇಳದೇ ಹೋಗಿದ್ದಾರೆ. ವಿಮಾನ ದುರಂತದ ಬಗ್ಗೆ ಮಾಧ್ಯಮದವರು ಪ್ರತಿಕ್ರಿಯೆ ಕೇಳಿದರೂ, ಕೇಳದ ರೀತಿಯಲ್ಲಿ ಮುಂದೆ ಸಾಗಿದ್ದಾರೆ.

ಭಾರತೀಯ ವಾಯುಪಡೆಗೆ ಸೇರಿದ ವಿಮಾನಗಳು ಏರ್ ಶೋ ಗೆ ತಾಲೀಮು ನಡೆಸುತ್ತಿದ್ದ ವೇಳೆ ದುರಂತಕ್ಕೀಡಾಗಿದ್ದರೂ ಬೆಂಗಳೂರಿನಲ್ಲಿಯೇ ಇದ್ದು ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ರಕ್ಷಣಾ ಸಚಿವರ ನಡೆ ಆಕ್ರೋಶಕ್ಕೆ ಕಾರಣವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ