ಗುಪ್ತಚರ ದಳದ ವ್ಯಫಲ್ಯವೇ ಈ ಘಟನೆಗೆ ಕಾರಣ: ಪಶ್ಚಿಮ ಬಂಗಾಳ ಸಿಎಂ. ಮಮತಾ ಬ್ಯಾನರ್ಜಿ

ಕೋಲ್ಕತ್ತಾ,ಫೆ.16- ಪುಲ್ವಾಮದಲ್ಲಿ ಉಗ್ರರು ವಿಧ್ವಂಸಕ ಕೃತ್ಯ ನಡೆಸಲು ಗುಪ್ತಚರ ದಳದ ವೈಫಲ್ಯವೇ ಕಾರಣ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆ ದೊಡ್ಡ ದುರಂತ. ಇದೆಲ್ಲಾ ಹೇಗಾಯ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಏನು ಮಾಡುತ್ತಿದ್ದರು ಎಲ್ಲಿ ತಪ್ಪಾಗಿದೆ ಎಂದು ನಮಗೆ ತಿಳಿಯಬೇಕಿದೆ ಎಂದು ಆಗ್ರಹಿಸಿದರು.

ಅಲ್ಲದೆ ಭದ್ರತಾ ವೈಫಲ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ದಾಳಿ ನಡೆಯುವುದಕ್ಕೂ ಮುನ್ನ ಸೇನೆಗೆ ಏಕೆ ಈ ಮಾಹಿತಿ ತಿಳಿಯಲಿಲ್ಲ ಹಲವು ಸೈನಿಕರು ಹುತಾತ್ಮರಾಗುವಂತಾಗಿದ್ದು ಏಕೆ? ಇದು ನನ್ನೊಬ್ಬಳ ಪ್ರಶ್ನೆಯಲ್ಲ, ದೇಶದ ಜನರ ಪ್ರಶ್ನೆ ಎಂದಿದ್ದಾರೆ.

2016ರ ಉರಿ ದಾಳಿಯ ನಂತರದ ಬಹುದೊಡ್ಡ ದಾಳಿಯಿದು. ಇದರಲ್ಲಿ ರಾಜಕೀಯ ಮಾಡಬಾರದು. ದೇಶದ ಜನತೆಗೆ ಜೊತೆಗೆ ನಾವು ಸದಾ ಇರುತ್ತೇವೆ ಎಂದಿದ್ದಾರೆ.

ಯೋಧರು ಹುತಾತ್ಮರಾದ ದಿನವೇ ಪ್ರಧಾನಿಗಳು ಕಾರ್ಯಕ್ರಮವೊಂದರಲ್ಲಿ ಯೋಜನೆಯೊಂದಕ್ಕೆ ಚಾಲನೆ ನೀಡಿದ್ದಾರೆ. ಇಂತಹ ಗಂಭೀರ ಘಟನೆಗಳು ನಡೆದಾಗ ರಾಜಕೀಯದ ಹಾಗೂ ಸರ್ಕಾರಿ ಕಾರ್ಯಕ್ರಮಗಳನ್ನು ನಿಲ್ಲಿಸಬೇಕು. ಅವರೇಕೆ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಲಿಲ್ಲ ಎಂದು ಮೋದಿ ವಿರುದ್ಧ ಹರಿಹಾಯದ್ದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ