ಭಾರತೀಯ ಯೋಧರ ಮೇಲೆ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ ಅಮೆರಿಕಾ

ವಾಷಿಂಗ್ಟನ್,ಫೆ.15-ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದಿರುವ ಪೈಶಾಚಿಕ ಕೃತ್ಯವನ್ನು ತೀವ್ರವಾಗಿ ಖಂಡಿಸಿರುವ ಅಮೆರಿಕ, ಉಗ್ರರಿಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸದಿದ್ದರೆ ಪಾಕಿಸ್ತಾನ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟ ಮಾತುಗಳಲ್ಲಿ ಎಚ್ಚರಿಸಿದೆ.

ನಿನ್ನೆ ಪಾಕ್ ಮೂಲದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿ 40 ಮಂದಿ ಭಾರತೀಯ ಯೋಧರನ್ನು ಬರ್ಬರವಾಗಿ ಹತ್ಯೆಗೈದಿದ್ದಾರೆ.

ಈ ಘಟನೆಗೆ ವಿಶ್ವಾದ್ಯಂತ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಉಗ್ರರ ಸ್ವರ್ಗವಾಗಿರುವ ಪಾಕಿಸ್ತಾನ ಈಗಲಾದರೂ ಉಗ್ರಗಾಮಿ ಸಂಘಟನೆಗಳಿಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸುವಂತೆ ಕಠಿಣ ಪದಗಳಲ್ಲಿಯೇ ಅಮೆರಿಕ ತರಾಟೆಗೆ ತೆಗೆದುಕೊಂಡಿದೆ.

ಉಗ್ರರು ಪಾಕ್ ನೆಲದಿಂದಲೇ ಇಂತಹ ಹೀನಕೃತ್ಯಗಳನ್ನು ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ನಿಮ್ಮ ಕುಮ್ಮಕ್ಕಿನಿಂದಲೇ ಉಗ್ರರು ಇಂದು ವಿಶ್ವದ ಶಾಂತಿಗೆ ಭಂಗ ಉಂಟಾಗುತ್ತಿದೆ ಎಂದಿದ್ದಾರೆ.

ನಿಮ್ಮ ಕಣ್ಣೋರೆಸುವ ತಂತ್ರವನ್ನು ನಿಲ್ಲಿಸಿ ಮೊದಲು ಉಗ್ರರ ವಿರುದ್ಧ ಕ್ರಮಕ್ಕೆ ಮುಂದಾಗಿ ಇಲ್ಲದಿದ್ದರೆ ಪರಿಣಾಮ ಎದುರಿಸಿ ಎಂದು ಅಮೆರಿಕದ ವೈಟ್‍ಹೌಸ್‍ನ ಪತ್ರಿಕಾ ಕಾರ್ಯದರ್ಶಿ ಸರ್ಹ ಸಂಡೇರ್ಸ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಯ್ನಾಡಿಗಾಗಿ ಪ್ರಾಣ ಕಳೆದುಕೊಂಡ ವೀರಯೋಧರ ನೋವಿನಲ್ಲಿ ಅಮೆರಿಕವು ಕಂಬನಿ ಮಿಡಿಯುತ್ತದೆ. ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ಎಲ್ಲ ರೀತಿಯ ಸಹಕಾರ, ಸಹಾಯವನ್ನು ಮುಂದುವರೆಸಲಿದ್ದೇವೆ. ಭಾರತದೊಂದಿಗೆ ಯಾವಾಗಲೂ ಇದ್ದೇ ಇರುತ್ತೇವೆ ಎಂಬ ಖಚಿತ ಭರವಸೆಯನ್ನು ನೀಡಿದ್ದಾರೆ.

ಐಎಸ್‍ಐ ಕೈವಾಡ?:
ನಿನ್ನೆ ಜಮ್ಮುಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ನಡೆದಿರುವ ದಾಳಿಗೆ ತಾನೇ ಕಾರಣ ಎಂದು ಪಾಕಿಸ್ತಾನದ ಜೈಷ್-ಎ-ಮೊಹಮ್ಮದ್ ಸಂಘಟನೆ ಹೇಳಿಕೊಂಡಿದ್ದರೂ ಅಮೆರಿಕದ ಗುಪ್ತಚರ ವಿಭಾಗ ಐಎಸ್‍ಐ ಕೈವಾಡವಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದೆ.
ಈ ಹಿಂದೆ ಇಂತಹ ಪೈಶಾಚಿಕ ಕೃತ್ಯವನ್ನು ಐಎಸ್‍ಐ ಉಗ್ರರು ಮಾತ್ರ ನಡೆಸಲು ಸಾಧ್ಯ. ಮೇಲ್ನೋಟಕ್ಕೆ ಜೈಷ್-ಎ-ಮೊಹಮ್ಮದ್ ಸಂಘಟನೆ ಹೊಣೆ ಹೊತ್ತುಕೊಂಡಿದೆಯಾದರೂ ಸಿರಿಯಾ ಮೂಲದ ಐಎಸ್‍ಐ ಉಗ್ರರ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಘಟನೆಗೂ ನಮಗೂ ಸಂಬಂಧವಿಲ್ಲ:
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಗೂ ತಮಗೂ ಯಾವುದೇ ಸಂಬಂಧವಿಲ್ಲ. ಇದೊಂದು ಅತ್ಯಂತ ಹೇಯಕೃತ್ಯ ಮತ್ತು ಗಂಭೀರವಾಗಿ ಚಿಂತಿಸಬೇಕಾದ ವಿಷಯ ಎಂದಿರುವ ಪಾಕಿಸ್ತಾನ, ಈ ಘಟನೆಗೂ ನನಗೂ ನಂಟು ಕಲ್ಪಿಸಬೇಡಿ ಎಂದು ಹೇಳಿದೆ.

ಆದರೆ ಈ ಘಟನೆಯ ಹೊಣೆಯನ್ನು ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯೇ ಹೊತ್ತುಕೊಂಡಿದ್ದು, ಆತ್ಮಾಹುತಿ ದಾಳಿಕೋರ ಆದಿಲ್ ಅಹ್ಮದ್ ಇದೇ ಸಂಘಟನೆಗೆ ಸೇರಿದ್ದರೂ ಪಾಕಿಸ್ತಾನ ತನ್ನ ಪಾತ್ರವಿಲ್ಲ, ತನಗೆ ನಂಟಿಲ್ಲ ಎನ್ನುತ್ತಿರುವುವುದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ನಿನ್ನೆ ಸಂಜೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಆವಂತಿಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ಸಿಆರ್ ಪಿಎಫ್ ವಾಹನದ ಮೇಲೆ ಆತ್ಮಾಹುತಿ ದಾಳಿಕೋರ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಆದಿಲ್ ಅಹ್ಮದ್ ದಾರ್ ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಡಿಕ್ಕಿ ಹೊಡೆಸಿದ ಪರಿಣಾಮ 37 ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು, 40ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ