ಜೈವಿಕ ಉತ್ಪಾದನೆ ಮತ್ತು ಬಳಕೆ ಬಗ್ಗೆ ಅರಿವು ಮೂಡಿಸಲಾಗುವುದು: ಸಚಿವ ಕೃಷ್ಣಭೈರೇಗೌಡ

ಬೆಂಗಳೂರು,ಫೆ.15-ಜೈವಿಕ ಇಂಧನ ಉತ್ಪಾದನೆ ಮತ್ತು ಬಳಕೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಜಿಲ್ಲಾ ಪಂಚಾಯ್ತಿಸರ್ಕಾರಿ ವಾಹನದಲ್ಲಿ ಬಯೋ ಡೀಸೆಲ್ ಬಳಕೆಗೆ ಅಧಿಕೃತ ಸುತ್ತೋಲೆ ಹೊರಡಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಭೈsರೇಗೌಡ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯ್ತಿಗಳ ವಾಹನ ವಿಭಾಗದ ಮುಖ್ಯಸ್ಥರು ಇನ್ನು ಮುಂದೆ ವಾಹನಗಳಲ್ಲಿ ಕಡ್ಡಾಯವಾಗಿ ಬಯೋಡೀಸೆಲ್ ಬಳಸುವಂತೆ ಸೂಚಿಸಲಾಗಿದೆ.
ಈಗಾಗಲೇ ಪ್ರತಿ ಜಿಲ್ಲೆಯಲ್ಲಿ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ, ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರಗಳನ್ನು ಆರಂಭಿಸಿದ್ದು, ಈ ಕೇಂದ್ರಗಳನ್ನು ಜಿಪಂ ವಾಹನ ವಿಭಾಗದ ಮುಖ್ಯಸ್ಥರು ಸಂಪರ್ಕಿಸುವಂತೆ ಹೇಳಿದ್ದಾರೆ.

ಬಯೋಡೀಸೆಲ್ ಬಳಕೆಯ ಬಗ್ಗೆ ಒಂದು ಮಾರ್ಗಸೂಚಿಯನ್ನು ಸಹ ನೀಡಲಾಗಿದ್ದು, ಅದರ ಅನುಸಾರ ಪ್ರತಿ ಜಿಲ್ಲೆಯ ಜೈವಿಕ ಇಂಧನ ಅಭಿವೃದ್ದಿ ಮಂಡಳಿ 50ರಿಂದ 400 ಲೀಟರ್ ಬಯೋಡೀಸೆಲ್‍ನ್ನು ಪೂರೈಕೆ ಮಾಡಲಿದೆ.

ಆರಂಭದಲ್ಲಿ ಡೀಸೆಲ್ ಜೊತೆ ಶೇ.5ರಷ್ಟು(100 ಲೀಟರ್ ಡೀಸೆಲ್‍ಗೆ 5 ಲೀಟರ್ ಬಯೋಡೀಸೆಲ್ ಮಿಶ್ರಣ) ಹಂತ ಹಂತವಾಗಿ ಇದನ್ನು ಹೆಚ್ಚಿಸಲಾಗುವುದು.
ಇದಲ್ಲದೆ ಬಯೋಡೀಸೆಲ್ ಬಳಕೆ ಕುರಿತಂತೆ ವಾಹನ ಚಾಲಕರಿಗೆ ಸೂಕ್ತ ತರಬೇತಿ ನೀಡಲು ಕಾರ್ಯಗಾರಗಳನ್ನು ನಡೆಸಲಾಗುವುದು.ಈ ಉದ್ದೇಶಿತ ಕಾರ್ಯದ ಯೋಜನೆಗೆ ಬಳಕೆಯಾಗುವ ಬಯೋ ಡೀಸೆಲ್ ವೆಚ್ಚವನ್ನು ಮಂಡಳಿಯೇ ಭರಿಸಲಿದೆ ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ