ಮದುವೆಯಾಗಿದ್ದರೂ ಸಹ ಹಳೆ ಪ್ರೇಮದ ಸೆಳೆತಕ್ಕೆ ಒಳಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದರು

ತುಮಕೂರು, ಫೆ.14- ವಿವಾಹ ಬಾಂಧವ್ಯಕ್ಕೆ ಒಳಗಾಗಿದ್ದರೂ ಸಹ ಹಳೆ ಪ್ರೇಮದ ಸೆಳೆತಕ್ಕೆ ಒಳಗಾಗಿದ್ದವರು ಈಗ ಪೋಲೀಸ್ ಠಾಣೆ ಮೆಟ್ಟಿಲೇರಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿ ಬೀದಿ ಜಗಳಕ್ಕಿಳಿದಿರುವ ಘಟನೆ ನಗರದಲ್ಲಿ ನಡೆದಿದೆ.

ಪ್ರೇಮಿಗಳ ದಿನದಂದೇ ಈ ಘಟನೆ ನಡೆದಿರುವುದು ಸ್ಥಳೀಯರನ್ನು ಹುಬ್ಬೇರುವಂತೆ ಮಾಡಿದೆ.

ಏನಿದು ಪ್ರಕರಣ: ಕಳೆದ ಮೂರು ವರ್ಷಗಳ ಹಿಂದೆ ನಗರದ ನಿವಾಸಿಗಳಾದ ನೇತ್ರಾವತಿ ಮತ್ತು ರಂಗನಾಥ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕೆಲವೊಂದು ವಿಚಾರಗಳಲ್ಲಿ ಮನಸ್ತಾಪ ಉಂಟಾಗಿ ಬೇರೆಯಾಗಿದ್ದರು.

ನಂತರದ ದಿನಗಳಲ್ಲಿ ಮನೆಯವರ ಒತ್ತಾಸೆಯಂತೆ ನೇತ್ರಾವತಿ ಬೇರೊಬ್ಬ ಯುವಕನ ಜತೆ ವಿವಾಹವಾಗಿದ್ದಳು.ಇದಕ್ಕೆ ಸಡ್ಡು ಹೊಡೆಯುವಂತೆ ರಂಗನಾಥ್ ಕೂಡ ಮತ್ತೊಬ್ಬ ಯುವತಿಯನ್ನು ವಿವಾಹವಾಗಿ ಸಂಸಾರ ನಡೆಸುತ್ತಿದ್ದರು.

ಅದೇನಾಯಿತೋ ಏನೋ ಮತ್ತೆ ಎಲ್ಲೋ ಒಂದು ಕಡೆ ನೇತ್ರಾವತಿ ಮತ್ತು ರಂಗನಾಥ್ ಎದುರುಬದುರಾಗಿದ್ದಾರೆ.ಮತ್ತೆ ಅವರ ಪ್ರೇಮ ಚಿಗುರೊಡೆದಿದೆ.ತಾವು ಬೇರ್ಪಟ್ಟು ವಿವಾಹವಾಗಿದ್ದರೂ ಅದನ್ನು ಮರೆತು ಮತ್ತೆ ಜತೆಯಲ್ಲೇ ಸುತ್ತಲಾರಂಭಿಸಿದ್ದರು.

ಈ ವೇಳೆ ಹಣಕಾಸಿನ ವ್ಯವಹಾರ ಕೂಡ ನಡೆದಿದೆ. ಇದೀಗ ಮತ್ತೆ ಇಬ್ಬರೂ ಜಗಳವಾಡಿಕೊಂಡು ಬೇರೆಯಾಗಿದ್ದಾರೆ. ಈ ವಿಷಯ ಅವರವರ ಮನೆಯವರಿಗೂ ಗೊತ್ತಾಗಿದೆ.

ಈಗ ರಂಗನಾಥ್ ನನ್ನ ಪೋಟೋ ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡುತ್ತಿದ್ದಾನೆ ಎಂದು ನೇತ್ರಾವತಿ ಇಲ್ಲಿನ ಪೋಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಅತ್ತ ರಂಗನಾಥ್ ಕೂಡ ನನ್ನ ಬಳಿ 1.50 ಲಕ್ಷ ರೂ.ಪಡೆದು ವಂಚಿಸಿ ಈಗ ನಾಟಕವಾಡುತ್ತಿದ್ದು, ನನ್ನನ್ನು ಬಲಿಪಶು ಮಾಡುತ್ತಿದ್ದಾಳೆ ಎಂದು ದೂರಿದ್ದಾನೆ.
ಪೋಲೀಸ್ ಠಾಣೆಯಲ್ಲೇ ಇಬ್ಬರೂ ಕೂಡ ತಮ್ಮ ತಮ್ಮ ಬಳಿ ಇರುವ ಪೋಟೋಗಳನ್ನು ಪ್ರದರ್ಶಿಸಿದ್ದಾರೆ.ಅಲ್ಲಿದ್ದವರು ಇವರ ಮೊಂಡಾಟ ನೋಡಿ ತಿಳಿ ಹೇಳಿದ್ದಾರೆ.

ಅಶ್ಲೀಲ ಪೋಟೋಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಈ ಇಬ್ಬರ ಹುಚ್ಚಾಟಕ್ಕೆ ಪೋಷಕರು ಆತಂಕಗೊಂಡಿದ್ದಾರೆ.ಕೆಲವು ಪೋಟೋಗಳು ಅಂತರ್ಜಾಲದಲ್ಲೂ ಹರಿದಾಡುತ್ತಿವೆ. ಇದರಿಂದ ಮಾನ ಹರಾಜಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ