ವಿಧಾನಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಜುಗಲ್‍ಬಂದಿ

ಬೆಂಗಳೂರು, ಫೆ.12-ನಿನ್ನೆಯಿಂದ ಸದನದಲ್ಲಿ ಮೌನವಾಗಿದ್ದ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವರು ಇಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಶಾಸಕರ ಖರೀದಿ ಪ್ರಕರಣದಲ್ಲಿ ಕೆಣಕುವ ಮೂಲಕ ಜುಗಲ್‍ಬಂದಿಗೆ ಕಾರಣರಾದರು.

ವಿಧಾನಸಭೆಯಲ್ಲಿಂದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮಾತನಾಡುತ್ತಿದ್ದಾಗ, ಈ ಹಿಂದೆ ಬೊಮ್ಮಾಯಿ ಅವರ ಪ್ರಕರಣದಲ್ಲಿ ಸರ್ಕಾರದ ವಿಶ್ವಾಸ ಮತ ಸದನದಲ್ಲೇ ಸಾಬೀತಾಗಬೇಕೆಂದು ಸುಪ್ರೀಂಕೋರ್ಟ್ ಮಹತ್ವ ತೀರ್ಪು ನೀಡಿತ್ತು. ಅದಕ್ಕೆ ಕಾರಣರಾಗಿದ್ದು ಕರ್ನಾಟಕದ ಎಸ್.ಆರ್.ಬೊಮ್ಮಾಯಿ ಅವರು.ನಮ್ಮ ಸರ್ಕಾರದ ರಚನೆಯಾದಾಗಿನಿಂದಲೂ ಅದು ಪತನಗೊಳ್ಳುವ ದಿನಾಂಕಗಳನ್ನು ಬಿಜೆಪಿಯವರು ಹೇಳುತ್ತಲೇ ಬಂದಿದ್ದಾರೆ. ಸರ್ಕಾರ ಅಭದ್ರಗೊಳ್ಳುವ ನಿಟ್ಟಿನಲ್ಲಿ ಶಾಸಕರ ಖರೀದಿಗೆ ಆರಂಭವಾಗಿದ್ದು ಯಾವಾಗಿನಿಂದ ಎಂದು ಪ್ರಶ್ನಿಸಿದರು.

ಆಗ ಎದುರಿಗೆ ಕುಳತಿದ್ದ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ನಿಮ್ಮ ಕಾಲದಲ್ಲೇ ಕುಳಿತುಕೊಂಡೇ ಕಟಕಿದರು. ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನಮ್ಮ ಕಾಲದಲ್ಲಿ ಯಾವಾಗ, ಎಲ್ಲಿಂದ ಪ್ರಾರಂಭವಾಯಿತು ಹೇಳಿ.ಆಡಿಯೋ ಪ್ರಕರಣವನ್ನು ಅಲ್ಲಿಂದಲೇ ತನಿಖೆ ಮಾಡಿಸೋಣ ಎಂದು ಪ್ರತಿಸವಾಲು ಹಾಕಿದರು.

ಆಡಿಯೋ ಪ್ರಕರಣ ಪ್ರಸ್ತಾಪವಾಗುತ್ತಿದ್ದಂತೆ ವಿಜಿಗೌಡರನ್ನು ಎಂಎಲ್‍ಸಿ ಮಾಡಲು ನೀವು 25 ಕೋಟಿ ಪಡೆದುಕೊಂಡಿದ್ದೀರ ಎಂದು ಮತ್ತೆ ಯಡಿಯೂರಪ್ಪ ಕುಮಾರಸ್ವಾಮಿಯವರನ್ನು ಕೆಣಕಿದರು. ಇದರಿಂದ ಕುಮಾರಸ್ವಾಮಿ ಸಿಟ್ಟಾಗಿ ಏರಿದ ಧ್ವನಿಯಲ್ಲಿ ಉತ್ತರ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ