ಸರ್ಕಾರ ಎಸ್‍ಐಟಿ ತನಿಖೆ ಕೈ ಬಿಡದಿದ್ದರೆ ಬಿಜೆಪಿಯಿಂದ ಅಹೋರಾತ್ರಿ ಧರಣಿ

ಬೆಂಗಳೂರು, ಫೆ.12- ಆಪರೇಷನ್ ಆಡಿಯೋ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಬದಲಾಗಿ ಬೇರೆ ಯಾವುದೇ ಸಮಿತಿಗಳಿಂದ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿರುವ ಬಿಜೆಪಿ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಲು ಮುಂದಾಗಿದೆ.

ದೇವದುರ್ಗದಲ್ಲಿ ಜೆಡಿಎಸ್ ಶಾಸಕರೊಬ್ಬರ ಪುತ್ರನ ಜತೆ ಬಿಜೆಪಿ ನಾಯಕರು ನಡೆಸಿದ ಮಾತುಕತೆಯ ಆಡಿಯೋ ಬಹಿರಂಗವಾದ ನಂತರ ಮುಜುಗರಕ್ಕೆ ಸಿಲುಕಿರುವ ಬಿಜೆಪಿ ನಿನ್ನೆ ಮತ್ತು ಇಂದಿನ ಕಲಾಪದ ಚರ್ಚೆಯಲ್ಲಿ ಪಶ್ಚಾತಾಪದ ದಾಟಿಯಲ್ಲೇ ಮಾತನಾಡಿತ್ತು. ಸುದೀರ್ಘ ಚರ್ಚೆಯ ನಂತರ ಆಡಿಯೋ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸಲಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ, ಸದನ ಸಮಿತಿ, ಶಿಷ್ಟಾಚಾರ ಸಮಿತಿ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಪಟ್ಟು ಹಿಡಿದಿದೆ. ಇದಕ್ಕೆ ಸಭಾಧ್ಯಕ್ಷರು ಒಪ್ಪುತ್ತಿಲ್ಲ. ಹೀಗಾಗಿ ಸರ್ಕಾರ ಮತ್ತು ಪ್ರತಿಪಕ್ಷದ ನಡುವೆ ಹಗ್ಗಜಗ್ಗಾಟ ನಡೆದಿದೆ.

ಸದನದ ಹೋರಾಟವನ್ನು ಇನ್ನೂ ಒಂದು ಹೆಜ್ಜೆ ಮುಂದೆ ತೆಗೆದುಕೊಂಡು ಹೋಗಿ ಅಹೋರಾತ್ರಿ ಧರಣಿ ನಡೆಸಲು ಬಿಜೆಪಿ ಮುಂದಾಗಿದೆ.

ಮಧ್ಯಾಹ್ನ ಬಿಜೆಪಿಯ ಶಾಸಕರು ಗಂಭೀರ ಚರ್ಚೆ ನಡೆಸಿ ಸರ್ಕಾರ ಎಸ್‍ಐಟಿ ತನಿಖೆ ಕೈ ಬಿಡದೇ ಇದ್ದರೆ ಅಹೋರಾತ್ರಿ ಧರಣಿ ನಡೆಸುವ ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ