ಸಂಕಷ್ಟದಲ್ಲಿರುವವರಿಗೆ ಬಿಬಿಎಂಪಿ ನೌಕರರ ಸಂಘದಿಂದ ಸಾಲ ಸೌಲಭ್ಯ

ಬೆಂಗಳೂರು, ಫೆ.7- ನೌಕರರು ಕೂಡಿಟ್ಟು ಠೇವಣಿ ಇಡುವ ಹಣಕ್ಕೆ ಆಕರ್ಷಕ ಬಡ್ಡಿ ಸಿಗುವಂತೆ ಮಾಡುವುದು ಹಾಗೂ ಸಂಕಷ್ಟದಲ್ಲಿರುವವರಿಗೆ ಸುಲಭ ರೀತಿಯಲ್ಲಿ ಸಾಲ ಸೌಲಭ್ಯ ಒದಗಿಸುವುದು ಬಿಬಿಎಂಪಿ ನೌಕರರ ಸಹಕಾರ ಸಂಘದ ಉದ್ದೇಶವಾಗಿದೆ ಎಂದು ಸಂಘದ ಅಧ್ಯಕ್ಷ ಅಮೃತ್‍ರಾಜ್ ಅಭಿಪ್ರಾಯಪಟ್ಟರು.

ಬಿಬಿಎಂಪಿ ನೌಕರರ ಸಹಕಾರ ಸಂಘದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಂತರ ಮಾತನಾಡಿದ ಅವರು, ನಮ್ಮ ಸಂಘ ಸಮಾಜಮುಖಿ ಕಾರ್ಯಗಳಾದ ನೌಕರರ ಮಕ್ಕಳ ಉನ್ನತ ವ್ಯಾಸಂಗಕ್ಕೆ ಸಹಾಯ ಮಾಡಲಿದೆ ಎಂದರು.

ಅದೇ ರೀತಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು, ಸಂಘದ ಸದಸ್ಯರಿಗೆ ವೈದ್ಯಕೀಯ ನೆರವು ನೀಡುವುದು ಹಾಗೂ ಅವರ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವುದಕ್ಕೆ ಪ್ರಥಮ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಅಮೃತ್‍ರಾಜ್ ಅವರನ್ನು ಹಿರಿಯ ಚಿತ್ರ ನಟಿ ಗಿರಿಜಾ ಲೋಕೇಶ್ , ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮಂಜೇಗೌಡ ಅಭಿನಂದಿಸಿದರು.

ಸಂಘದ ಉಪಾಧ್ಯಕ್ಷ ಕೆ.ಜಿ.ರವಿ, ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ , ಪಿಂಚಣಿ ನೌಕರರ ಸಂಘದ ಅಧ್ಯಕ್ಷ ರಮೇಶ್ ಸಂಗಾ, ಕಾರ್ಯಪಾಲಕ ಅಭಿಯಂತ ಎಚ್.ವಿ.ಅಶ್ವತ್ಥ್, ಸಂಗೊಳ್ಳಿ ರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣಮೂರ್ತಿ, ಪದಾಧಿಕಾರಿಗಳಾದ ಸುರೇಶ್, ನಂಜಪ್ಪ , ಗಂಗಾಧರ್ ಜಾಣಗೆರೆ , ರಾಮಚಂದ್ರ, ತಿಮ್ಮಪ್ಪ , ಸಂತೋಷ್‍ಕುಮಾರ್ ನಾಯಕ್, ಶಾಂತಾನಂದ, ಲಕ್ಷ್ಮಿ , ಕಮಲಾ, ರೇಣುಕಾಂಬ , ಅಕ್ಕ ಮಹಾದೇವಿ ಮತ್ತಿತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ