ಸಾಧನೆ ಪ್ರಶ್ನಿಸಿದ ದಿನೇಶ್ ಗುಂಡೂರಾವ್​ಗೆ ‘ಮುಸ್ಲಿಂ ಹೆಂಗಸಿನ ಹಿಂದೆ ಓಡಿಹೋಗಿದ್ದೇ ನಿಮ್ಮ ಸಾಧನೆ’ ಎಂದ ಕೇಂದ್ರ ಸಚಿವ ಹೆಗಡೆ

ಬೆಂಗಳೂರು: ಹಿಂದೂ ಹುಡಗಿಯರ ಮೈ ಮುಟ್ಟಿದವರ ಕೈ ಕತ್ತಿರುಸುತ್ತೇನೆ ಎಂದಿದ್ದ ಕೇಂದ್ರ ಸಚಿವ ಅನಂತ್​ ಕುಮಾರ್​ ಹೆಗಡೆ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತಮ್ಮ ಸಾಧನೆ ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​ಗೆ “ಮುಸ್ಲಿಂ ಹೆಂಗಸಿನ ಹಿಂದೆ ಓಡಿಹೋಗಿದ್ದೇ ನಿಮ್ಮ ಸಾಧನೆ,” ಎಂದು ತಿರುಗೇಟು ನೀಡಿದ್ದಾರೆ.

ಮಾದಾಪುರದಲ್ಲಿ ನಡೆದ ಹಿಂದೂ ಐಕ್ಯ ಸಮ್ಮೇಳನದಲ್ಲಿ ಮಾತನಾಡಿದ ಹೆಗಡೆ, “ಹಿಂದೂ ಹುಡುಗಿಯನ್ನು ಮುಟ್ಟಿದರೆ ಅವರ ಕೈಯನ್ನೇ ಇಲ್ಲದಂತೆ ಮಾಡಿ,” ಎಂದು ಕರೆ ನೀಡಿದ್ದರು. ಈ ವಿಚಾರವಾಗಿ ಟ್ವೀಟ್​ ಮಾಡಿದ್ದ ಗುಂಡೂರಾವ್​, “ಕೇಂದ್ರ ಸಚಿವರಾಗಿ ಅಥವಾ ಸಂಸದರಾಗಿ ನಿಮ್ಮ ಸಾಧನೆ ಏನು? ಕರ್ನಾಟಕದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು? ಇಂಥವರೆಲ್ಲ ಸಂಸದರಾಗಿ ಆಯ್ಕೆ ಆಗುತ್ತಿರುವುದು ಶೋಚನೀಯ,” ಎಂದು ಟ್ವೀಟ್​ ಮಾಡಿದ್ದರು.

ಈ ಬಗ್ಗೆ ಕಾಂಗ್ರೆಸ್​​ ಮಾಡಿದ ಟ್ವೀಟ್​ಗೂ ಅನಂತ್​ ಕುಮಾರ್​ ಪ್ರತ್ಯುತ್ತರ ನೀಡಿದ್ದಾರೆ. “ಅನಂತ್​ ಕುಮಾರ್​ ಒಬ್ಬ ಮಂತ್ರಿಯಾಗಿರಲು, ಸಂಸದನಾಗಿರಲು ನಾಲಾಯಕ್ಕು. ಬಿಜೆಪಿ ಇಂಥವರ ಮೇಲೆ ಕಡಿವಾಣ ಹಾಕದೆ ಇವರನ್ನು ಹೆಚ್ಚೆಚ್ಚು ಪ್ರೋತ್ಸಾಹಿಸುತ್ತಿದ್ದಾರೆ. ಧರ್ಮಗಳ ಮಧ್ಯೆ ಸಾಮರಸ್ಯವನ್ನು ಹಾಳು ಮಾಡುವ, ಸಂವಿಧಾನವನ್ನು, ಅನ್ಯಕೋಮಿನವರನ್ನು, ದಲಿತರನ್ನು ಅವಮಾನಿಸುವ ಇಂತಹ ಬಿಜೆಪಿಯವರಿಗೆ ಜನರೇ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು,” ಎಂದಿದ್ದಾರೆ

ಕೊಡಗಿನಲ್ಲಿ ಮಾತನಾಡಿದ್ದ ಅವರು, “ಶಬರಿಮಲೆಗೆ ಪ್ರವೇಶಿಸಿದ್ದ ಮಹಿಳೆಯರು ಕೊಡಗಿನಲ್ಲಿ ತಂಗಿದ್ದರು ಎಂಬ ಮಾಹಿತಿ ಇದೆ. ಅಂತಹ ದೇಶದ್ರೋಹಿಗಳು ಮುಂದೆ ಕೊಡಗಿಗೆ ಭೇಟಿ ಕೊಟ್ಟರೆ ಇಲ್ಲಿಯೇ ಮಣ್ಣಾಗಿಸಿ. ಕುತುಬ್​ ಮಿನಾರ್​ ನಿರ್ಮಿಸಿದ್ದು ಖುತುಬ್​ ಉದ್ದೀನ್​ ಐಬಕ್​ ಎಂಬ ಸುಳ್ಳು ಇತಿಹಾಸ ಸೃಷ್ಟಿಸಲಾಗಿದೆ. ಆದರೆ ಅದು ಜೈನರ 24 ನೇ ದೇವಾಲಯವಾಗಿತ್ತು. ಇದನ್ನು ಭಾರತೀಯ ಪ್ರಾಚ್ಯ ಇಲಾಖೆಯಲ್ಲಿ ಹೇಳಲಾಗಿದೆ,” ಎಂದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ