ರಾಜಕೀಯ ಗುದ್ದಾಟಕ್ಕೆ ತಾತ್ಕಾಲಿಕ ಕದನ ವಿರಾಮ; ಸಿಎಂ ಎಚ್​ಡಿಕೆ ಮಗನ ಸಿನಿಮಾ ವಿಕ್ಷೀಸಿದ ಸರ್ವಪಕ್ಷ ಶಾಸಕರು

ಬೆಂಗಳೂರು:  ದೊಡ್ಡ ಹಾಲ್​. ಅಲ್ಲಿ ಹತ್ತಾರು ಸೀಟುಗಳು. ಅಚ್ಚರಿ ಎಂದರೆ, ಅಲ್ಲಿ ಆಪರೇಷನ್​ ಕಮಲ ಮಾಡ್ತೀವಿ ಎಂದು ಹೇಳಿಕೊಂಡು ಓಡಾಡುತ್ತಿದ್ದ ಬಿಜೆಪಿ ನಾಯಕರಿದ್ದರು. ನೀವು ಆಪರೇಷನ್​ ಕಮಲ ಮಾಡಿದ್ರೆ ನಾವೇನು ಕೈಕಟ್ಟಿ ಕೂರಲ್ಲ. ನಾವು ಆಪರೇಷನ್​ ಹಸ್ತ ಮಾಡ್ತೀವಿ  ಎನ್ನುವ ಕಾಂಗ್ರೆಸ್​ ನಾಯಕರಿದ್ದರು. ನಮ್ಮ ಪಕ್ಷದವರು ಯಾವಾಗಲೂ ನಮ್ಮ ಜೊತೆಯೇ ಇರುತ್ತಾರೆ ಎಂದು ಹೇಳೀದ್ದ ಜೆಡಿಎಸ್​​ ನಾಯಕರಿದ್ದರು. ಹೀಗೊಂದು ದೃಶ್ಯ ಕಂಡು ಬಂದಿದ್ದು ಬೆಂಗಳೂರಿನ ಒರಾಯನ್​ ಮಾಲ್​ನಲ್ಲಿರುವ ಪಿವಿಆರ್​ ಥಿಯೇಟರ್​ನಲ್ಲಿ.

ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮಗ ನಿಖಿಲ್​ ಕುಮಾರ್​ ನಟನೆಯ ‘ಸೀತಾರಾಮ ಕಲ್ಯಾಣ’ ಚಿತ್ರ ನಾಳೆ (ಜ.25) ವಿಶ್ವಾದ್ಯಂತ ಬಿಡುಗಡೆ ಆಗುತ್ತಿದೆ. ದೇಶಾದ್ಯಂತ 300 ಚಿತ್ರಮಂದಿರಗಳಲ್ಲಿ ‘ಸೀತಾರಾಮ’ ತೆರೆಗೆ ಬರುತ್ತಿದೆ. ಇಂದು ಸರ್ವಪಕ್ಷದ ಶಾಸಕರಿಗೋಸ್ಕರ ಪ್ರಿಮೀಯರ್​ ಶೋ ಏರ್ಪಡಿಸಲಾಗಿತ್ತು. ಬಿಜೆಪಿ, ಕಾಂಗ್ರೆಸ್​ ಹಾಗೂ ಜೆಡಿಎಸ್​ ನಾಯಕರು ಪಕ್ಷಭೇದ ಮರೆತು ಸಿನಿಮಾ ವೀಕ್ಷಿಸಿದರು.

ಸದ್ಯ ರಾಜ್ಯದಲ್ಲಿ ನಾನಾ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.  ಬಿಜೆಪಿ ನಾಯಕರು ಆಪರೇಷನ್​ ಕಮಲ ಮಾಡುತ್ತೇವೆ ಎಂದು ಹರಿಯಾಣದ ಗುರುಗ್ರಾಮದ ರೆಸಾರ್ಟ್​ನಲ್ಲಿ  ಕೆಲ ದಿನಗಳ ಕಾಲ ಠಿಕಾಣಿ ಹೂಡಿದ್ದರು. ಈ ನಡುವೆ ಕಾಂಗ್ರೆಸ್​​ನ ರಮೇಶ್​ ಜಾರಕಿಹೊಳಿ ರೆಬೆಲ್​ ಆಗಿದ್ದರು. ಈ ಬೆಳವಣಿಗೆ ನಂತರ ಕಾಂಗ್ರೆಸ್​​ನಿಂದ ರೆಸಾರ್ಟ್​​ ರಾಜಕೀಯ ಆರಂಭಿಸಿತ್ತು. ರಾಜಕೀಯ ಗುದ್ದಾಟಕ್ಕೆ ತಾತ್ಕಾಲಿಕ ವಿರಾಮ ನೀಡಿ, ಎಲ್ಲ ಪಕ್ಷದ ನಾಯಕರು ಸಿನಿಮಾ ವೀಕ್ಷಿಸಿ ಸ್ವಲ್ಪ ರಿಲೀಫ್​ ಆಗಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಾದ ಕೆ.ಎಸ್. ಈಶ್ವರಪ್ಪ, ಸಚಿವ ಆರ್.ವಿ. ದೇಶಪಾಂಡೆ, ಕೆ.ಜೆ. ಜಾರ್ಜ್, ಜಮೀರ್ ಅಹಮದ್ ಖಾನ್ ಮುಂತಾದವರು ಚಿತ್ರ ವೀಕ್ಷಿಸಿದ್ದಾರೆ.

‘ಸೀತಾರಾಮ ಕಲ್ಯಾಣ’ದಲ್ಲಿ ನಿಖಿಲ್​ಗೆ ಜೊತೆಯಾಗಿ ರಚಿತಾ ರಾಮ್​ ಕಾಣಿಸಿಕೊಂಡಿದ್ದಾರೆ. ‘ಅಂಜನೀ ಪುತ್ರ’ ಖ್ಯಾತಿಯ ಎ. ಹರ್ಷ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ತೆಲುಗು ನಟ ಶರತ್​ ಕುಮಾರ್​, ರವಿಶಂಕರ್​, ಗಿರಿಜಾ ಲೋಕೇಶ್​​, ಮೊದಲಾದವರು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕುಮಾರಸ್ವಾಮಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದೇಶಾದ್ಯಂತ 400 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ