ಪ್ರಧಾನಿಯಾಗುವುದಕ್ಕೆ ನಾನು ಸಮರ್ಥ ಮತ್ತು ಅರ್ಹ ವ್ಯಕ್ತಿ : ಬಿಜೆಪಿ ಮಾಜಿ ನಾಯಕ ಯಶವಂತ ಸಿನ್ಹಾ

ನವದೆಹಲಿ, ಜ.22-.ದೇಶದಲ್ಲಿ ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸುವ, ಲಕ್ಷಾಂತರ ಕಿ.ಮೀ. ರಸ್ತೆಗಳನ್ನು ನಿರ್ಮಿಸುವ, ನಗರ-ಪಟ್ಟಣಗಳನ್ನು ಕಟ್ಟುವ ಮತ್ತು ಅಸಂಖ್ಯ ಕೈಗಾರಿಕೆಗಳನ್ನು, ನೀರಾವರಿ ಯೋಜನೆಗಳನ್ನು ಸ್ಥಾಪಿಸುವ ಅಗತ್ಯವಿದ್ದು ಈ ಎಲ್ಲ ಕೆಲಸಗಳನ್ನು ಮಾಡುವುದಕ್ಕೆ ದೇಶದಲ್ಲಿ ಅರ್ಹ ನಾಯಕ ಇಲ್ಲ. ಈ ಎಲ್ಲದಕ್ಕೆ ಅತ್ಯಂತ ನಿಕಟವಿರುವ ವ್ಯಕ್ತಿ ತಾನಾಗಿರುವುದರಿಂದ ತಾನೇ ಮುಂದಿನ ಪ್ರಧಾನಿಯಾಗುವುದಕ್ಕೆ ಅರ್ಹ ವ್ಯಕ್ತಿ ಎಂದು ಬಿಜೆಪಿಯ ಮಾಜಿ ನಾಯಕ ಯಶವಂತ ಸಿನ್ಹಾ ಹೇಳಿದರು.

ಸುದ್ದಿ ವಾಹಿನಿ ಜತೆಗೆ ಮಾತನಾಡುತ್ತಿದ್ದ ಯಶವಂತ ಸಿನ್ಹಾ ಅವರು ಎನ್‍ಡಿಎ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿರುವ ನಿತಿನ್ ಗಡ್ಕರಿ ಅವರಿಗೆ ಪ್ರಧಾನಿಯಾಗುವ ಅವಕಾಶ ಇಲ್ಲ. ಏಕೆಂದರೆ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 200ಕ್ಕಿಂತ ಕಡಿಮೆ ಸೀಟುಗಳು ಪ್ರಾಪ್ತವಾದರೂ ಪ್ರಧಾನಿ ನರೇಂದ್ರ ಮೋದಿ ಅವರಾಗಲೀ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರಾಗಲೀ ನಿವೃತ್ತರಾಗುವುದಿಲ್ಲ. ಆದುದರಿಂದ ಗಡ್ಕರಿ ಅವರು ಮೋದಿ ಅವರ ಉತ್ತರಾಧಿಕಾರಿ ಆಗಲಾರರು ಎಂದು ಹೇಳಿದರು.

ಯಶವಂತ ಸಿನ್ಹಾ ಅವರು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಹಿಂದಿನ ಎನ್‍ಡಿಎ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದವರು. ಬಿಜೆಪಿಯಿಂದ ಹೊರ ಬಂದಿರುವ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯುಗ್ರ ಟೀಕಾಕಾರರಾಗಿದ್ದಾರೆ.

ಭಾರತಕ್ಕೆ ಈಗ ಕೋಟ್ಯಂತರ ಉದ್ಯೋಗ ಸೃಷ್ಟಿಸುವ, ಕೃಷಿಯನ್ನು ಲಾಭದಾಯಕ ಉದ್ಯಮ ಮಾಡಬಲ್ಲ, ಲಕ್ಷಗಟ್ಟಲೆ ಕಿಮೀ ರಸ್ತೆ ನಿರ್ಮಿಸುವ, ಅಸಂಖ್ಯಾತ ಕೈಗಾರಿಕೆಗಳನ್ನು, ನಗರ-ಪಟ್ಟಣಗಳನ್ನು, ನೀರಾವರಿ ಯೋಜನೆಗಳನ್ನು ನಿರ್ಮಿಸುವ ಸಮರ್ಥ ನಾಯಕನ ಅಗತ್ಯವಿದೆ. ಆದರೆ ನನ್ನ ದೃಷ್ಟಿಯಲ್ಲಿ ಅಂತಹ ನಾಯಕ ದೇಶದಲ್ಲಿ ಇಲ್ಲ; ಹಾಗಿದ್ದರೂ ಈ ಎಲ್ಲ ಯೋಚನೆ, ಯೋಜನೆಗಳಿಗೆ ನಾನು ಅತ್ಯಂತ ನಿಕಟನಿರುವುದರಿಂದ ಮುಂದಿನ ಪ್ರಧಾನಿಯಾಗುವುದಕ್ಕೆ ನಾನೇ ಸೂಕ್ತ ವ್ಯಕ್ತಿ ಎಂದು ಯಶವಂತ ಸಿನ್ಹಾ ಹೇಳಿದರು.

ಸಿಪಿಎಂ ನಾಯಕ ಸೀತಾರಾಮ ಯೆಚೂರಿ ಅವರು ಸಿನ್ಹಾ ಬಳಿಕ ನಾನೇ ಮುಂದಿನ ಪ್ರಧಾನಿಯಾಗಲು ಸಮರ್ಥ ವ್ಯಕ್ತಿ ಎಂದು ಹೇಳಿಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ