ಆಟೋ ಮತ್ತು ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಒಬ್ಬರ ಸಾವು

ಗೌರಿಬಿದನೂರು, ಜ.22- ಆಂಧ್ರ ಸಾರಿಗೆ ಬಸ್ ಚಾಲಕನ ಅತಿವೇಗ ಮತ್ತು ಅಜಾಗರೂಕತೆಯಿಂದ ಮುಂದೆ ಬರುತ್ತಿದ್ದ ಆಟೋ ಮತ್ತು ದ್ವಿಚಕ್ರ ವಾಹನಕ್ಕೆ ಮುಖಾಮುಖಿ ಡಿಕ್ಕಿಹೊಡೆದ ಪರಿಣಾಮ ಸ್ಥಳದಲ್ಲೇ ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ್ದು, ಆಟೋದಲ್ಲಿದ್ದ 4 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕು ಕಚೇರಿ ಕಟ್ಟಡದ (ಸಕ್ಕರೆ ಕಾರ್ಖಾನೆ) ಬಳಿ ನಡೆದಿದೆ.

ಹೊಸೂರು ಹೋಬಳಿಯ ಸಿಂಗಾನಹಳ್ಳಿ ವಾಸಿ ನರಸಿಂಹಮೂರ್ತಿ(35) ಮೃತಪಟ್ಟ ಬೈಕ್ ಸವಾರ.

ಬೈಕ್ ಹಿಬ್ಬಂದಿ ಸವಾರ ಕೊರಟಗೆರೆ ತಾಲೂಕು ಅಕ್ಕಿರಾಂಪುರ ಗ್ರಾಮದ ಕೆಂಪರಾಜು (36), ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮುದುಗೆರೆಯ ಜಯಮ್ಮ(60) ಹೆಚ್.ನಾಗಸಂದ್ರ, ಮೀರ್ ಅಲಿವಾದ್(50) ಅಲ್ಲೀಪುರ, ನಾಸೀರ್ (28), ತೊಂಡೇಬಾವಿ, ಲಕ್ಷ್ಮಮ್ಮ(45) ಅವರುಗಳು ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಗೌರಿಬಿದನೂರಿನಿಂದ ರಾಜ್ಯ ಸಾರಿಗೆ ಬಸ್ ಬೆಂಗಳೂರು ಕಡೆಗೆ ಹೋಗುತ್ತಿತ್ತು, ಇದರ ಹಿಂದೆಯೇ ಆಂಧ್ರಸಾರಿಗೆ ಬಸ್ ಹಿಂದೂಪುರದಿಂದ ಬೆಂಗಳೂರು ಕಡೆಗೆ ಬರುತ್ತಿದ್ದಾಗ ಚಾಲಕ ಮುಂದೆ ಹೋಗುತ್ತಿದ್ದ ಬಸ್ ಹಿಂದಿಕ್ಕುವ ಅವಸರದಲ್ಲಿ ಮುಂದೆ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ಆಟೋಗೂ ಗುದ್ದಿದ ಪರಿಣಾಮ ಈ ಅವಘಡ ಸಂಭವಿಸಿದೆ.

ಸುದ್ದಿ ತಿಳಿದ ತಕ್ಷಣ ಎಸ್‍ಐ ಅವಿನಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ