ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಜ.18-ಆಪರೇಷನ್ ಕಮಲದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮೈತ್ರಿ ಸರ್ಕಾರದ ಬಗ್ಗೆ ಯಾವುದೇ ಆತಂಕವೂ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಪರೇಷನ್ ಕಮಲ ಮುಗಿದಿಲ್ಲ. ಅದನ್ನು ಮುಂದುವರೆಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆಪರೇಷನ್ ಕಮಲದ ಬಗ್ಗೆ ತಲೆಯನ್ನೂ ಕೆಡಿಸಿಕೊಂಡಿಲ್ಲ. ನನಗೆ ಯಾವುದೇ ಆತಂಕವೂ ಇಲ್ಲ ಎಂದು ಹೇಳಿದರು.

ಆತಂಕ ಇರೋದು ಆತಂಕ ಸೃಷ್ಟಿ ಮಾಡಿಕೊಂಡಿರುವವರಿಗೆ ಎಂದ ಅವರು, ಇಂದು ಆತಂಕ ಬಗೆಹರಿಯುತ್ತದೆಯೋ, ಇಲ್ಲವೋ ಕಾದು ನೋಡಿ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ನಾನು ಆರಾಮಾಗಿದ್ದೇನೆ. ಯಾವುದೇ ಆತಂಕವೂ ಇಲ್ಲ ಎಂದು ತಿಳಿಸಿದರು.

ಅತೃಪ್ತ ಶಾಸಕರು ಕಾಂಗ್ರೆಸ್ ಶಾಸಕಾಂಗ ಸಭೆಗೆ ಬರಲಿದ್ದಾರೆಯೇ ಎಂಬ ಪ್ರಶ್ನೆಗೆ ಸಂಜೆಯವರೆಗೂ ಕಾದು ನೋಡಿ ಎಂಬ ಉತ್ತರವನ್ನು ಮುಖ್ಯಮಂತ್ರಿ ನೀಡಿದರು.
ಎರಡು ದಿನಗಳ ಕಾಲ ತಾವು ವೇಣುಗೋಪಾಲ್ ಅವರನ್ನು ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಆ ಕಾರಣಕ್ಕಾಗಿ ಇಂದು ಸೌಹಾರ್ದಯುತ ಭೇಟಿ ಮಾಡಿದ್ದಾಗಿ ತಿಳಿಸಿದರು.
ಇಂದು ಸಂಜೆ ಕೋಲ್ಕತ್ತಾಗೆ ಪ್ರವಾಸ ಕೈಗೊಳ್ಳುತ್ತಿದ್ದು, ನಾಳೆ ಸಂಜೆ ಮೈಸೂರಿಗೆ ತೆರಳಬೇಕಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ