ಮಾಜಿ ಶಾಸಕ ಜಯಂತಿಲಾಲ್ ಭಾನುಶಾಲಿ ಹಂತಕರ ಗುಂಡಿಗೆ ಬಲಿ

ಭುಜ್/ಅಹಮದಾಬಾದ್, ಜ.8- ರೈಲಿನಲ್ಲೇ ಬಿಜೆಪಿ ಮಾಜಿ ಶಾಸಕರೊಬ್ಬರ ಮೇಲೆ ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಗುಜರಾತ್‍ನಲ್ಲಿ ನಡೆದಿದೆ.

ಮಾಜಿ ಶಾಸಕ ಜಯಂತಿಲಾಲ್ ಭಾನುಶಾಲಿ ಹಂತಕರ ಗುಂಡಿಗೆ ಬಲಿಯಾದ ಗುಜರಾತ್ ಬಿಜೆಪಿ ಶಾಸಕ.

ಸಯ್ಯಾಜಿ ಎಕ್ಸ್‍ಪ್ರೆಸ್ ರೈಲಿನಲ್ಲಿ ಅವರ ಮೇಲೆ ಗುಂಡು ಹಾರಿಸಿ ಕೊಲ್ಲಲಾಗಿದೆ. ಭುಜ್‍ನಿಂದ ಅಹಮದಾಬಾದ್‍ಗೆ ಶಾಸಕರು ತೆರಳುತ್ತಿದ್ದಾಗ ಕಟಾರಿಯಾ ಮತ್ತು ಸುರ್ಬರಿ ರೈಲು ನಿಲ್ದಾಣಗಳ ನಡುವೆ ಈ ಕೃತ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಂತಕರು ಹಾರಿಸಿದ ಗುಂಡಿನಿಂದ ಅವರ ಎದೆ ಮತ್ತು ಒಂದು ಕಣ್ಣು ಛಿದ್ರವಾಗಿದೆ.

ಈ ದಾಳಿ ನಡೆದ ಸಂದರ್ಭದಲ್ಲಿ ಮಾಜಿ ಶಾಸಕರು ರೈಲಿನ ಪ್ರಥಮ ದರ್ಜೆ ಎಸಿ ಭೋಗಿಯಲ್ಲಿ ಪ್ರಯಾಣಿಸುತ್ತಿದ್ದರು.

ಘಟನೆ ನಂತರ ರೈಲು ಮಲಿಯಾ ರೈಲ್ವೆ ನಿಲ್ದಾಣದಲ್ಲಿ ಎರಡು ತಾಸುಗಳ ಕಾಲ ನಿಲುಗಡೆಯಾಗಿತ್ತು. ಅಲ್ಲಿ ಅವರ ಶವವನ್ನು ಪೊಲೀಸರು ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದರು.

ಸುದ್ದಿ ತಿಳಿದ ಕೂಡಲೇ ರೈಲ್ವೆ ಪೊಲೀಸರು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಹಂತಕ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಈ ಹಿಂದೆ ಬಿಜೆಪಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದ ಜಯಂತಿಲಾಲ್ ಅವರ ಮೇಲೆ ಕಳೆದ ವರ್ಷ ಮಹಿಳೆ ಮೇಲೆ ಅತ್ಯಾಚಾರ ನಡೆಸಿದ ಆರೋಪವಿತ್ತು. ತಮ್ಮ ಮೇಲಿನ ಆರೋಪವನ್ನು ಅವರು ತಳ್ಳಿ ಹಾಕಿದ್ದರು.

ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ