ಮಾಜಿ ಸಿ.ಎಂ.ಸಿದ್ದರಾಮಯ್ಯ ಅವರಿಂದ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆ 13 ಗ್ರಂಥಗಳ ಲೋಕಾರ್ಪಣೆ

ಬೆಂಗಳೂರು,  ಜ.6-ಕುರುಬರ ಜೀವನ, ಆರ್ಥಿಕತೆ, ರಾಜಕೀಯ ಅಧ್ಯಯನ ಮಾಡಿ ಗ್ರಂಥಗಳನ್ನು ರಚಿಸಿ ಬಿಡುಗಡೆ ಮಾಡಿರುವ ಈ ದಿನ  ನಿಜಕ್ಕೂ ಐತಿಹಾಸಿಕ  ದಿನವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ  ಕುರುಬರ ಸಾಂಸ್ಕøತಿಕ ಪರಿಷತ್ ಹೊರತಂದಿರುವ ಕುರುಬರ ಸಂಸ್ಕøತಿ ದರ್ಶನ ಮಾಲಿಕೆ 13 ಗ್ರಂಥಗಳ ಲೋಕಾರ್ಪಣೆ  ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, 2008ರಲ್ಲೇ ಈ ಗ್ರಂಥಗಳ ಅಧ್ಯಯನಕ್ಕೂ ಮುನ್ನ ಉದ್ಘಾಟನೆ ಮಾಡಲಾಗಿತ್ತು. ಆಗ ನಾನೂ ಹೋಗಿದ್ದೆ. ಈಗ ನಾನೇ ಈ ಗ್ರಂಥಗಳ ಲೋಕಾರ್ಪಣೆ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು.

ಸುಮಾರು 10 ವರ್ಷಗಳ ಕಾಲ ಅಧ್ಯಯನ ಮಾಡಿ ಈ ಗ್ರಂಥಗಳನ್ನು ರಚಿಸಿದ್ದಾರೆ. ಇದಕ್ಕೆ ಮಾಜಿ ಸಚಿವ ಎಚ್.ಎಂ.ರೇವಣ್ಣ, ಡಿ.ಕೆ.ರವಿ ಪ್ರಮುಖ ಕಾರಣ. ಅನೇಕ ಸಾಹಿತಿಗಳು ಕೂಡ ಇದರ ಹಿಂದೆ ಇದ್ದಾರೆ. ಅದರಲ್ಲೂ ರೇವಣ್ಣ ಭಗೀರಥನ ಹಾಗೆ ನನ್ನ ಹಿಂದೆ ಬಿದ್ದು ಗ್ರಂಥ ರಚನೆಯ ಅವನ ಪ್ರಯತ್ನ ಫಲಪ್ರದವಾಗಿದೆ ಎಂದು ಹೇಳಿದರು.

ನಾವು  ಸಣ್ಣವರಾಗಿದ್ದಾಗ ಕುರಿ ಕಾಯುವುದಕ್ಕೆ ಹೋಗಿ ಎಂದು ಮನೆಯವರು ಹೇಳುತ್ತಿದ್ದರು. ಹಿಂದೆ ಜಾತಿ ಯಾವುದು ಎಂದು ಹೇಳಿಕೊಳ್ಳಲು ಕೆಲವರು ಹಿಂಜರಿಯುತ್ತಿದ್ದರು.  ವ್ಯಾಸ ಬೆಸ್ತ ಜಾತಿಗೆ ಸೇರಿದವರು, ವಾಲ್ಮೀಕಿ ವಾಲ್ಮೀಕಿ ಜಾತಿಗೆ ಸೇರಿದವರು, ಕಾಳಿದಾಸ ಕುರುಬ ಜಾತಿಗೆ ಸೇರಿದವರು. ಇವರೆಲ್ಲ  ಇಡೀ ವಿಶ್ವದಲ್ಲೇ ಹೆಸರು ಮಾಡಿಲ್ಲವೇ ಎಂದು ಪ್ರಶ್ನಿಸಿದರು.
ಬ್ರಿಟಿಷರು ಭಾರತಕ್ಕೆ ಬಂದದ್ದು ಒಳ್ಳೆಯದೆಂದು ನಾನು ಹೇಳುವುದಿಲ್ಲ. ಆದರೆ  ಅವರು ಸಾರ್ವತ್ರಿಕ ಶಿಕ್ಷಣ ನೀತಿ ಜಾರಿಗೆ ತಂದುದು ಮತ್ತು ಕಾನೂನು ಮಾಡಿದ್ದು ಬಹಳಷ್ಟು ಜನರಿಗೆ ಸಹಾಯವಾಯಿತು ಎಂದು ಸಿದ್ದರಾಮಯ್ಯ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ