6 ವರ್ಷದ ಬಳಿಕ ಸಲಿಂಗಿಗಳು ಮಾಡಿದ್ದೇನು? ನೋಂದಣಾಧಿಕಾರಿ ನಿರಾಕರಿಸಿದ್ದೇಕೆ?

ಲಖನೌ: ಅವರಿಬ್ಬರ ನಡುವೆ ಕಾಲೇಜು ದಿನಗಳಲ್ಲೇ ಪ್ರೇಮಾಂಕುರವಾಗಿತ್ತು. ದಾಂಪತ್ಯಕ್ಕೆ ಕಾಲಿಸಿರಿ ಒಟ್ಟಾಗಿ ಜೀವಿಸುವ ಕನಸು ಚಿಗುರೊಡೆದಿತ್ತು. ಆದರೆ, ಮನೆಯಲ್ಲಿ ಬಲವಂತದ ಮದುವೆಯಿಂದ ಇಬ್ಬರ ಕನಸು ಭಗ್ನವಾಗಿತ್ತು. ಆದರೂ ಸುಮಾರು ಆರು ವರ್ಷಗಳ ಬಳಿಕ ಅವರಿಬ್ಬರೂ ಮತ್ತೆ ಒಂದಾಗಿದ್ದಾರೆ. ದೇಗುಲವೊಂದರಲ್ಲಿ ಇಬ್ಬರೂ ದಾಂಪತ್ಯಕ್ಕೆ ಕಾಲಿರಿಸುವ ಮೂಲಕ ಕನಸು ನನಸಾಗಿಸಿಕೊಂಡಿದ್ದಾರೆ.

ಆದರೆ ಹೀಗೆ ಪ್ರೀತಿಸಿ ಮದುವೆಯಾಗಿದ್ದು ಗಂಡು-ಹೆಣ್ಣು ಅಲ್ಲ, ಬದಲಿಗೆ ಇಬ್ಬರು ಯುವತಿಯರು!

ಅದರಲ್ಲೂ ತಮಗೆ ಬಲವಂತದಿದ್ದ ಕಟ್ಟಲಾದ ಇಬ್ಬರು ಗಂಡಂದರಿಗೆ ವಿಚ್ಛೇದನ ನೀಡಿ, ಪರಸ್ಪರ ಒಂದಾಗುವ ಮೂಲಕ ಇವರಿಬ್ಬರೂ 6 ವರ್ಷದ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ. 24 ಮತ್ತು 26 ವರ್ಷದ ಈ ಇಬ್ಬರೂ ಮಹಿಳೆಯರು ಹಮೀರ್‌ಪುರದ ದೇಗುಲವೊಂದರಲ್ಲಿ ಹಾರ ಬದಲಿಸಿಕೊಳ್ಳುವ ಮೂಲಕ ಸಮಾಜಕ್ಕೆ ಸಡ್ಡು ಹೊಡೆದು ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ವಕೀಲರು ಹಾಗೂ ಸ್ನೇಹಿತರು ಈ ಅಪರೂಪದ ಮದುವೆಗೆ ಸಾಕ್ಷಿಯಾಗಿದ್ದಾರೆ.

ಕಾನೂನು ತೊಡಕು!
ಭಾರತದಲ್ಲಿ ಸಲಿಂಗ ಕಾಮವನ್ನು ಕಾನೂನುಬದ್ಧಗೊಳಿಸಿದ್ದರೂ, ಸಲಿಂಗ ವಿವಾಹಕ್ಕೆ ಆಸ್ಪದವಿಲ್ಲ. ಹೀಗಾಗಿ ಈ ಜೋಡಿಯ ಮದುವೆಯ ನೋಂದಣಿಗೆ ಅಧಿಕಾರಿಗಳು ನಿರಾಕರಿಸಿದ್ದಾರೆ.

ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಕಳೆದ ವರ್ಷ ಸೆ.6ರಂದು ಸಲಿಂಗಕಾಮ ಅಪರಾಧ ಎಂದು ಪರಿಗಣಿಸಲ್ಪಟ್ಟ ಐಪಿಸಿ ಸೆಕ್ಷ ನ್‌ 377ನ್ನು ರದ್ದುಗೊಳಿಸಿತ್ತು. ಆದರೆ ಸಮಾನಲಿಂಗಿಗಳು ಮದುವೆಗೆ ಅವಕಾಶ ನೀಡುವುದಿಲ್ಲ ಎಂದು ಸರಕಾರ ಹೇಳಿದೆ.

”ಸಲಿಂಗಿಗಳು ಜತೆಯಾಗಿರಲು ಸುಪ್ರೀಂ ಕೋರ್ಟ್‌ ಅವಕಾಶ ನೀಡಿರುವುದರಿಂದ ನಮ್ಮನ್ನು ಪ್ರತ್ಯೇಕಿಸಲು ಯಾರಿಂದಲೂ ಸಾಧ್ಯವಿಲ್ಲ,” ಎಂದು ಜೋಡಿ ಹೇಳಿದೆ.
ಮನೆಯಲ್ಲಿ ತಕರಾರು: ”ಕಾಲೇಜು ದಿನಗಳಲ್ಲೇ ಇವರಿಬ್ಬರ ಬಗ್ಗೆ ತಿಳಿದ ಕುಟುಂಬ ಸದಸ್ಯರು ಕಾಲೇಜನ್ನು ಮಧ್ಯದಲ್ಲೇ ಬಿಡಿಸಿ ಆರು ತಿಂಗಳ ಒಳಗಾಗಿ ಇಬ್ಬರಿಗೂ ಬಲವಂತದಿಂದ ಮದುವೆ ಮಾಡಿದ್ದರು. ಆದರೂ ಒಬ್ಬರನ್ನೊಬ್ಬರು ಮರೆಯಲು ಸಾಧ್ಯವಾಗಿರಲಿಲ್ಲ.

ಆತ್ಮಹತ್ಯೆ ಪ್ರಕರಣಗಳು ಹೆಚ್ಚು: ಸಲಿಂಗಕಾಮಕ್ಕೆ ಸಮಾಜ ಅಥವಾ ಕುಟುಂಬದಲ್ಲಿ ಸಮ್ಮತಿ ಇಲ್ಲದ ಕಾರಣ, ಇಂತಹ ಪ್ರೇಮದ ಸುಳಿಗೆ ಸಿಲುಕಿದ ಬಹುತೇಕ ಜೋಡಿ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ. ಬಲವಂತದ ಮದುವೆಗೆ ಇಷ್ಟವಿರದ ಮದುವೆಗೆ ಕೊರಳೊಡ್ಡುವ ಇಂತಹ ಯುವತಿಯುರು ಸಾವಿಗೆ ಶರಣಾಗುತ್ತಾರೆ. 1995-2003ರ ನಡುವೆ ಕೇರಳದಲ್ಲಿ ಇಂತಹ 22 ಸಲಿಂಗಕಾಮಿ ಯುವತಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ