ತಾವು ಕೂಡ ರಮೇಶ್ ಜಾರಕಿಹೊಳಿ ಬೆಂಬಲಿಗ ಎಂದು ಹೊಸ ಬಾಂಬ್ ಸಿಡಿಸಿದ ಅಥಣಿ ಶಾಸಕ ಮಹೇಶ್ ಕುಮಟಹಳ್ಳಿ

ಬೆಂಗಳೂರು,ಡಿ.31- ಅಜ್ಞಾತ ಸ್ಥಳದಲ್ಲಿರುವ ರಮೇಶ್ ಜಾರಕಿಹೊಳಿ ಅವರೊಂದಿಗೆ ಮಾಜಿ ಸಚಿವ ಆರ್.ಶಂಕರ್ ಮತ್ತು ಶಾಸಕ ನಾಗೇಂದ್ರ ಅವರಿದ್ದಾರೆ ಎಂದು ಹೇಳುತ್ತಿರುವ ಬೆನ್ನಲ್ಲೇ ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಹಳ್ಳಿ ತಾವು ಕೂಡ ರಮೇಶ್ ಜಾರಕಿಹೊಳಿ ಅವರ ಬೆಂಬಲಿಗ ಎಂದು ಹೇಳುವ ಮೂಲಕ ಹೊಸ ಬಾಂಬ್ ಹಾಕಿದ್ದಾರೆ.

ಹಂತ ಹಂತವಾಗಿ ಒಬ್ಬೊಬ್ಬರೇ ರಮೇಶ್ ಜಾರಕಿಹೊಳಿ ಪರ ಮಾತನಾಡಲು ಆರಂಭಿಸಿರುವುದು ಕಾಂಗ್ರೆಸ್ ವರಿಷ್ಠರಿಗೆ ನುಂಗಲಾರದ ಬಿಸಿ ತುಪ್ಪವಾಗುತ್ತಿದೆ.
ಸಚಿವ ಸ್ಥಾನ ಕಳೆದುಕೊಂಡಿರುವ ಪಕ್ಷೇತರ ಶಾಸಕ ಆರ್.ಶಂಕರ್ ಅವರು ಕಾಂಗ್ರೆಸ್ ನಡವಳಿಕೆ ವಿರುದ್ಧ ಅಸಮಾಧಾನಗೊಂಡು ಜಾರಕಿಹೊಳಿ ಜೊತೆ ಗುರುತಿಸಿಕೊಂಡಿದ್ದಾರೆ.

ಅದೇ ರೀತಿ ಇನ್ನೊಬ್ಬ ಪಕ್ಷೇತರ ಶಾಸಕ ನಾಗೇಶ್ ಮತ್ತು ಕಾಂಗ್ರೆಸ್‍ನ ಶಾಸಕ ನಾಗೇಂದ್ರ ಮೂರು ಮಂದಿ ರಮೇಶ್ ಜಾರಕಿಹೊಳಿ ಅವರ ಬೆಂಬಲಕ್ಕೆ ನಿಂತಿದ್ದಾರೆ ಎಂದು ಹೇಳಲಾಗಿದೆ.

ಈಗ ಅಥಣಿ ಕ್ಷೇತ್ರದ ಶಾಸಕ ಮಹೇಶ್ ಕುಮಟಹಳ್ಳಿ ಬಹಿರಂಗವಾಗಿಯೇ ರಮೇಶ್ ಜಾರಕಿಹೊಳಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.

ನಾನು ಇಂದು, ಮುಂದು ಎಂದೆಂದೂ ರಮೇಶ್ ಜಾರಕಿಹೊಳಿ ಅವರ ಬೆಂಬಲಿಗ. ಅವರಿಗೆ ತೊಂದರೆಯಾದರೆ ಅವರ ಬೆಂಬಲಕ್ಕೆ ನಿಂತುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ