ಹಣಕಾಸು ವಿಚಾರದಲ್ಲಿ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ತುಮಕೂರು,ಡಿ.26- ಸ್ನೇಹಿತರ ನಡುವೆ ಹಣಕಾಸು ಹಾಗೂ ಬೈಕ್ ವಿಚಾರಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಸೀಫ್(22) ಕೊಲೆಯಾದ ದುರ್ದೈವಿ. ಅನೀಲ್, ಸುನೀಲ್ ಸೇರಿದಂತೆ ನಾಲ್ವರು ಆಸೀಫ್‍ನನ್ನು ಕೊಚ್ಚಿ ಕೊಂದಿದ್ದಾರೆ.

ಇವರೆಲ್ಲರೂ ಸ್ನೇಹಿತರಾಗಿದ್ದು ನಿನ್ನೆ ಹಣಕಾಸು ಹಾಗೂ ಬೈಕ್ ವಿಚಾರವಾಗಿ ಜಗಳ ನಡೆದಿದೆ.

ಜಗಳ ವಿಕೋಪಕ್ಕೆ ಹೋದ ಹಿನ್ನೆಲೆ ಅನೀಲ್, ಸುನೀಲ್ ಸೇರಿದಂತೆ ನಾಲ್ವರು ನಗರ ಠಾಣಾ ವ್ಯಾಪ್ತಿಯ ಮಂಡಿಪೇಟೆಯ ಅವಲಕ್ಕಿ ರೈಸ್‍ಮಿಲ್ ಬಳಿಯ ನಾಲ್ಕು ಗಾಲಿ ಬಾವಿ ರಸ್ತೆ ತಿರುವಿನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ದಿವ್ಯ ಗೋಪಿನಾಥ್, ಶೋಭಾರಾಣಿ, ಡಿವೈಎಸ್‍ಪಿ ತಿಪ್ಪೇಸ್ವಾಮಿ, ವೃತ್ತ ನಿರೀಕ್ಷಕ ಚಂದ್ರಶೇಖರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದಿವ್ಯ ಗೋಪಿನಾಥ್ ಅವರು, ಈಗಾಗಲೇ ಪ್ರಕರಣ ಸಂಬಂಧ ಅನೀಲ್ ಎಂಬಾತನನ್ನು ಬಂಧಿಸಲಾಗಿದ್ದು, ಇನ್ನೆರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ