ರಾಣಿ ಚೆನ್ನಮ್ಮ ಸಮಾಧಿ ಅಭಿವೃದ್ಧಿಗೆ ಒಂದು ಕೋಟಿ ರೂ. ಅನುದಾನ ಬಿಡುಗಡೆ, ಸಚಿವ ಸಾ.ರಾ.ಮಹೇಶ್

ಬೆಳಗಾವಿ(ಸುವರ್ಣಸೌಧ), ಡಿ.21- ರಾಣಿ ಚೆನ್ನಮ್ಮ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸಲು ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ವಿಧಾನಸಭೆಗೆ ತಿಳಿಸಿದರು.

ವಿಧಾನಸಭೆಯಲ್ಲಿ ಮಂಡನೆಯಾದ ಪ್ರಶ್ನೋತ್ತರದಲ್ಲಿ ಬಿಜೆಪಿ ಶಾಸಕ ಉಮೇಶ್ ಬಿ.ಕತ್ತಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲಾಗಿದ್ದು, ವಿಜಯಪುರ, ಬೀದರ್, ಕಲಬುರ್ಗಿ ಪ್ರದೇಶಗಳ ಸ್ಮಾರಕಗಳನ್ನು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರಿಸಿ ಡೌಸಿಯರ್ (ದಾಖಲೆ ಪತ್ರ ಒಳಗೊಂಡ ಕಡತ) ಸಿದ್ದಗೊಳಿಸಿ ಅನುಮೋದನೆಗಾಗಿ ಯುನೆಸ್ಕೋಗೆ ಸಲ್ಲಿಸಲಾಗಿದೆ ಎಂದರು.

ಭಾರತೀಯ ಪುರಾತತ್ವ ಇಲಾಖೆಗೆ ಒಳಪಡುವ ಸ್ಮಾರಕಗಳನ್ನು ಹೊರತುಪಡಿಸಿ 162 ರಾಜ್ಯ ಸಂರಕ್ಷಿತ ಸ್ಮಾರಕ ಪ್ರದೇಶಗಳಿವೆ. ಇವುಗಳ ಅಭಿವೃದ್ಧಿಯನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ. ಈ ಪೈಕಿ 29 ಸ್ಮಾರಕಗಳನ್ನು 15.25 ಕೋಟಿ ರೂ.ವೆಚ್ಚದಲ್ಲಿ ಸಂರಕ್ಷಿಸಲಾಗಿದೆ ಎಂದು ತಿಳಿಸಿದರು.

ರೇಣುಕಾಯಲ್ಲಮ್ಮ ಕ್ಷೇತ್ರದಲ್ಲಿ ಐದು ಕೋಟಿ ವೆಚ್ಚದಲ್ಲಿ ಧಾರ್ಮಿಕ ವಸತಿ, ಸಮುದಾಯ ಭವನ, ಸ್ನಾನಗೃಹ, ಲಗೇಜ್ ಕೊಠಡಿ ನಿರ್ಮಾಣ ಮಾಡಲು ಮಂಜೂರು ಮಾಡಿದ್ದು, ಮೊದಲ ಹಂತದಲ್ಲಿ ಎರಡೂವರೆ ಕೋಟಿ ರೂ.ಗಳನ್ನು ಕೆಟಿಐಎಲ್ ಸಂಸ್ಥೆಗೆ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ತಂಗುದಾಣ ಹಾಗೂ ಕುಡಿಯುವ ನೀರಿನ ಆರ್‍ಒ ಪ್ಲಾಂಟ್ ನಿರ್ಮಿಸಲು 60 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ವಿಜಯಪುರ, ಬಾದಾಮಿ, ಹಂಪಿ ಸೇರಿದಂತೆ ಪ್ರವಾಸಿ ತಾಣಗಳನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಅಭಿವೃದ್ಧಿಪಡಿಸಲು ಹೋಟೆಲ್ ಸೌಲಭ್ಯ ಕಲ್ಪಿಸಲು ಸರ್ಕಾರ ಅನುಮೋದನೆ ನೀಡಿದೆ. ಈ ಸಂಬಂಧ ವಿವರವಾದ ಯೋಜನೆ ಸಿದ್ಧಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ರಾಮತೀರ್ಥ, ರಾಜಹಂಸಘಢ, ನವಿಲು ತೀರ್ಥ, ಸೊಗಲಕ್ಷೇತ್ರ, ಕಿತ್ತೂರು, ಸವದತ್ತಿ ಯಲ್ಲಮ್ಮ, ಮಲಭ್ರಮ ಡ್ಯಾಮ್, ಗೋಕಾಕ್ ಫಾಲ್ಸ್, ಒಡಕಿನ ಮಲ್ಕಿಪಾಲ್ಸ್, ಧೂಪದಾಳ, ಹಲಸಿ, ಶಬರಿ ವ್ಯಾಲಿ, ನಿಡಸೂಸಿ ಹಾಗೂ ಘಟಪ್ರಭವನ್ನು ಪ್ರವಾಸಿ ತಾಣವನ್ನಾಗಿ ಗುರುತಿಸಲಾಗಿದೆ ಎಂದು ಶಾಸಕ ಜಾರಕಿಹೊಳಿ ಸತೀಶ್ ಲಕ್ಷ್ಮೀಣ್‍ರಾವ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ