ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್‍ಗಾಗಿ ಸಿಸಿಬಿ ಪೊಲೀಸರಿಂದ ತೀವ್ರ ಹುಡುಕಾಟ

ಬೆಂಗಳೂರು,ಡಿ.15-ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಬಸವರಾಜ್‍ಗಾಗಿ ಸಿಸಿಬಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.

ಆರೋಪಿ ಬಸವರಾಜ್ ಆಂಧ್ರದಲ್ಲಿ ಇರುವ ಬಗ್ಗೆ ಮಾಹಿತಿ ಇದ್ದು ಸಿಸಿಬಿ ಪೊಲೀಸರು ಆಂಧ್ರ ಹಾಗೂ ಗೋವಾದಲ್ಲಿ ಹುಡುಕಾಟ ನಡೆಸುತ್ತಿದ್ದಾರೆ.
ಈ ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡುತ್ತಿದ್ದದು ಆರೋಪಿ ಶಿವಕುಮಾರ್ ಆದರೆ, ಈ ಪ್ರಶ್ನೆ ಪತ್ರಿಕೆಯನ್ನು ಅಭ್ಯರ್ಥಿಗಳಿಗೆ ಡೀಲ್ ಮಾಡುತ್ತಿದ್ದದು ಆರೋಪಿ ಬಸವರಾಜ್ ಎಂದು ತನಿಖೆಯಿಂದ ತಿಳಿದುಬಂದಿತ್ತು.

ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ನಕಲಿ ಅಕೌಂಟ್‍ಗಳ ಮೂಲಕವೇ ಪ್ರಶ್ನೆ ಪತ್ರಿಕೆಗಳನ್ನು ಡೀಲ್ ಮಾಡುತ್ತಿದ್ದರು.ಕೊಡಗಿನ ಶನಿವಾರ ಸಂತೆ ಬಳಿಯ ಕೂಡ್ಲಿಪೇಟೆಯನ್ನು ಡೀಲಿಂಗ್ ಸ್ಪಾಟ್‍ನ್ನಾಗಿ ಶಿವಕುಮಾರ್ ಮಾಡಿಕೊಂಡಿದ್ದನು.

ಕಳೆದ 24ರಂದು ಶನಿವಾರಸಂತೆಯ ಕೂಡ್ಲಿಪೇಟೆಯಲ್ಲಿ ಅಭ್ಯರ್ಥಿಗಳನ್ನು ಆರೋಪಿ ಬಸವರಾಜ್ ಒಂದೆಡೆ ಸೇರಿಸಿದ್ದನು.ಸುಮಾರು 119 ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಜೊತೆಗೆ ಆರೋಪಿ ಶಿವಕುಮಾರ್ ಉತ್ತರವನ್ನು ಸಹ ಬರೆಸಿದ್ದನು.

ಪ್ರಕರಣದಲ್ಲಿ ಈಗಾಗಲೇ ಶಿವಕುಮಾರ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, ಬಲಗೈ ಬಂಟ ಬಸವರಾಜ್‍ಗಾಗಿ ಸಿಸಿಬಿ ತೀವ್ರ ಹುಡುಕಾಟ ನಡೆಸುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ