ಕಾರಿಗೆ ಡಿಕ್ಕಿ ಹೊಡೆದ ಅಪರಿಚಿತ ವಾಹನ, ಘಟನೆಯಲ್ಲಿ ಮೂವರ ಸಾವು

ತಿಪಟೂರು, ಡಿ.7-ಅಪರಿಚಿತ ವಾಹನವೊಂದು ಅತಿ ವೇಗವಾಗಿ ಮುನ್ನುಗ್ಗಿ ಮಾರುತಿ ಸುಜುಕಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಭದ್ರಾವತಿಯ ಗಂಧರ್ವ ಆರ್ಕೆಸ್ಟ್ರಾ ತಂಡದ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಭದ್ರಾವತಿಯ ಪ್ರವೀಣ್ (23), ಯೋಗೇಶ್(22) ಮತ್ತು ಗಿರೀಶ್(23) ಮೃತಪಟ್ಟ ದುರ್ದೈವಿಗಳಾಗಿದ್ದು, ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಇಂದು ಬೆಳಗ್ಗೆ ನಾಗಮಂಗಲದಲ್ಲಿ ಆಯೋಜಿಸಿದ್ದ ಆರ್ಕೆಸ್ಟ್ರಾದ ನಿಮಿತ್ತ ಭದ್ರಾವತಿಯ ಗಂಧರ್ವ ಆರ್ಕೆಸ್ಟ್ರಾ ತಂಡದ ನಾಲ್ವರು ಊಟ ಮಾಡಿಕೊಂಡು ರಾತ್ರಿ ಮಾರುತಿ ಸುಜುಕಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 206 ತಿಪಟೂರು ಸಮೀಪದ ಮಾದಿಹಳ್ಳಿ ಬಳಿಯ ಡಾಬಾವೊಂದರ ಬಳಿ ಅತಿ ವೇಗವಾಗಿ ಮುನ್ನುಗ್ಗಿದ ಭಾರೀ ವಾಹನವೊಂದು ಇವರ ಕಾರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಮೂವರು ಸ್ಥಳದಲ್ಲೇ ಮೃತಪಟ್ಟರೆ, ಉಳಿದ ಒಬ್ಬನ ಸ್ಥಿತಿ ಗಂಭೀರವಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆ ಡಾಬಾದಲ್ಲಿದ್ದವರೆಲ್ಲ ಸ್ಥಳಕ್ಕೆ ಹೋಗುವಷ್ಟರಲ್ಲಿ ಅಪಘಾತವೆಸಗಿದ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು, ಕಾರು ನಜ್ಜುಗುಜ್ಜಾಗಿತ್ತು.

ಡಾಬಾದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ತಿಪಟೂರು ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣರಾಜ್, ಸಬ್‍ಇನ್ಸ್‍ಪೆಕ್ಟರ್ ಕಾಂತರಾಜ್, ಸಹಾಯಕ ಸಬ್‍ಇನ್ಸ್‍ಪೆಕ್ಟರ್ ನಿಂಗರಾಜು ಸೇರಿದಂತೆ ಹಲವು ಸಿಬ್ಬಂದಿಗಳು ಎರಡು ಆ್ಯಂಬುಲೆನ್ಸ್‍ಗಳ ಮೂಲಕ ಹರಸಾಹಸ ಪಟ್ಟು ಕಬ್ಬಿಣದ ಕಟ್ಟಿಂಗ್ ಮಿಷನ್ ತರಿಸಿ ಶವಗಳನ್ನು ಹೊರತೆಗೆದಿದ್ದಾರೆ.

ಕಾರಿನಲ್ಲಿದ್ದ ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು, ಆತನನ್ನು ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.
ಅಯ್ಯೋ…ನಮ್ಮನ್ನು ಕಾಪಾಡಿ..

ಅಪಘಾತದಿಂದ ಗಂಭೀರ ಗಾಯಗೊಂಡು ನರಳುತ್ತಿದ್ದ ಯುವಕ ಅಯ್ಯೋ… ದೇವರೇ ನಮ್ಮನ್ನು ಉಳಿಸಿ, ಕಾಪಾಡಿ… ಯಾಕಪ್ಪಾ ಇಂಥ ಶಿಕ್ಷೆ ನೀಡಿದೆ ಎಂದು ರೋದಿಸುತ್ತಿದ್ದಾಗ ನೆರೆದಿದ್ದ ಪೊಲೀಸರು ಹಾಗೂ ಜನರ ಕಣ್ಣಲ್ಲಿ ಕಂಬನಿ ತುಂಬಿ ಬಂತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ