ಕೊಡಂಗಲ್​​ನಲ್ಲಿ ಕೆಸಿಆರ್ ಸಭೆಗೂ ಮುನ್ನ ತೆಲಂಗಾಣ ಕಾಂಗ್ರೆಸ್​ ನಾಯಕ ರೇವಂತ್ ರೆಡ್ಡಿ ಬಂಧಿಸಿದ ಪೊಲೀಸರು

ಹೈದರಾಬಾದ್​: ಮುಖ್ಯಮಂತ್ರಿ ಹಾಗೂ ಟಿಆರ್​ಎಸ್​ ಮುಖ್ಯಸ್ಥ ಕೆ.ಚಂದ್ರಶೇಖರ್​ ರಾವ್​ ಅವರ ಕೊಡಂಗಲ್​ ಕ್ಷೇತ್ರದ ಕೊಸ್ಗಿ ಸ್ಥಳದಲ್ಲಿ ನಡೆಸಲಿರುವ ಪ್ರಚಾರ ಸಮಾವೇಶಕ್ಕೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದ ತೆಲಂಗಾಣ ಕಾಂಗ್ರೆಸ್​ ನಾಯಕ ಹಾಗೂ ಕೊಡಂಗಲ್​ ಕ್ಷೇತ್ರದ ಅಭ್ಯರ್ಥಿ ರೇವಂತ್​ ರೆಡ್ಡಿಯನ್ನು ಪೊಲೀಸರು ಇಂದು ಬೆಳಗ್ಗಿನ ಜಾವ ಬಂಧಿಸಿದ್ದಾರೆ.

ರೇವಂತ್​ ರೆಡ್ಡಿ ಬಂಧನದಿಂದ ಕೊಡಂಗಲ್​ ನಗರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಮುನ್ನೆಚ್ಚರಿಕೆಯಾಗಿ ಪೊಲೀಸರು ನಗರದಲ್ಲಿ 144 ಸೆಕ್ಷನ್​ ಜಾರಿಗೊಳಿಸಿದ್ದಾರೆ. ರೆಡ್ಡಿ ಅವರನ್ನು ಬೆಳಗ್ಗೆ ಬಂಧಿಸಿದ ಪೊಲೀಸರು, ಆನಂತರ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

ರೇವಂತ್​ ರೆಡ್ಡಿ ಇದೇ ವರ್ಷ ಟಿಆರ್​ಎಸ್​ ಪಕ್ಷವನ್ನು ತೊರೆದು, ಕಾಂಗ್ರೆಸ್​ ಸೇರ್ಪಡೆಗೊಂಡಿದ್ದರು. ಮತ್ತು ಕೊಡಂಗಲ್​ ಕ್ಷೇತ್ರದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಕೆಸಿಆರ್ ಅವರ ಪ್ರಚಾರ ರ್ಯಾಲಿಗೆ ಅಡ್ಡಿಪಡಿಸುವುದಾಗಿ ರೇವಂತ್ ರೆಡ್ಡಿ ಬೆದರಿಕೆಯೊಡ್ಡಿದ್ದರು. ಈ ಹೇಳಿಕೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ರೆಡ್ಡಿ ಅವರಿಗೆ ನೋಟಿಸ್​ ಕೂಡ ಜಾರಿ ಮಾಡಿತ್ತು.

ರೆಡ್ಡಿ ಅವರ ಬಂಧನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್​ ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆರೋಪಿಸಿದೆ.
ರೆಡ್ಡಿ ಪತ್ನಿ ನನಗೆ ಬಂಧನದ ವಿಷಯ ತಿಳಿಸಿದರು. ಪೊಲೀಸರು ಮನೆ ಬಾಗಿಲನ್ನು ಮುರಿದು, ಬಲವಂತವಾಗಿ ಅವರನ್ನು ಕರೆದೊಯ್ದಿದ್ದಾರೆ. ರಾಜಕೀಯಕ್ಕಾಗಿ ಟಿಆರ್​ಎಸ್​ ಪೊಲೀಸರನ್ನು ಉಪಯೋಗಿಸಿಕೊಳ್ಳಬಾರದು. ರಾಜಕೀಯ ಎದುರಾಳಿಯನ್ನು ಮುಗಿಸಲು ಇದು ಸರಿಯಾದ ದಾರಿಯಲ್ಲ,” ಎಂದು ಕರ್ನಾಟಕ ಸಚಿವ ಡಿ.ಕೆ.ಶಿವಕುಮಾರ್​ ಅವರು ರೆಡ್ಡಿ ಬಂಧನಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಟ್ವೀಟ್ ಮಾಡಿದ್ದಾರೆ.
ಪಕ್ಷದ ನಾಯಕ ಮನೀಶ್ ತಿವಾರಿ ಅವರು, ಈ ಘಟನೆಗೆ ಕಾರಣರಾದವರನ್ನು ಚುನಾವಣೆಯಿಂದ ವಜಾಗೊಳಿಸಿ ಎಂದು ಚುನಾವಣಾ ಆಯೋಗಕ್ಕೆ ಒತ್ತಾಯಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ