ಬೆನ್ನುಹುರಿ ಸಮಸ್ಯೆ ಇರುವವರಿಗೆ ಮತ್ತು ಪುನರ್ವಸತಿ ಕಾರ್ಯಕರ್ತರಿಗೆ ಗೌರವಧನ

ಬೆಂಗಳೂರು, ಡಿ.3- ಸ್ಪೈನಲ್ ಕಾರ್ಡ್ (ಬೆನ್ನುಹುರಿ) ಸಮಸ್ಯೆಯಿಂದ ಸಂಪೂರ್ಣವಾಗಿ ಹಾಸಿಗೆ ಇಡಿದಿರುವವರಿಗೆ ತಿಂಗಳಿಗೆ ಐದುಸಾವಿರ, ಗ್ರಾಮೀಣ ಪ್ರದೇಶದ ಪುನರ್ವಸತಿ ಕಾರ್ಯಕರ್ತರಿಗೆ 10ಸಾವಿರ ಗೌರವಧನ ನೀಡುವಂತೆ ಸಚಿವೆ ಜಯಮಾಲಾ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿಶ್ವವಿಕಲಚೇತನ ದಿನಾಚರಣೆ-2018 ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಬಳಲಿ ಹಾಸಿಗೆ ಹಿಡಿದವರ ನೆರವಿಗೆ ಸರ್ಕಾರ ಮುಂದಾಗಬೇಕಿದೆ. ಅಲ್ಲದೆ, ಗ್ರಾಮೀಣ ಭಾಗಗಳಲ್ಲಿ ಪುನರ್ವಸತಿ ಕಾರ್ಯಕರ್ತರಿಗೆ ಪ್ರಸ್ತುತ ಆರು ಸಾವಿರ ಗೌರವ ಧನ ನೀಡಲಾಗುತ್ತಿದ್ದು, ಅವರಿಗೆ 10ಸಾವಿರ ನೀಡಬೇಕು. ಮೂರು ಸಾವಿರ ಗೌರವಧನದವರಿಗೆ ಮಾಸಿಕ ಐದು ಸಾವಿರ ನೀಡುವ ಮೂಲಕ ನೆರವಿಗೆ ದಾವಿಸಬೇಕಿದೆ ಎಂದರು.

ಅಂಗವಿಕಲರಿಗೆ ಒಂದು ಅಂಗದ ವೈಫಲ್ಯತೆ ಇದ್ದರೂ ಉಳಿದ ಅಂಗಗಳು ಸಾಕಷ್ಟು ಚುರುಕಾಗಿ ಕೆಲಸ ನಿರ್ವಹಿಸುತ್ತವೆ. ಅವರು ಅಂತಹ ಅಂಗಗಳ ಬಳಕೆಯಿಂದ ವಿಶ್ವದಲ್ಲೇ ವಿಶಿಷ್ಟವಾದ ಸಾಧನೆ ಮಾಡುತ್ತಾರೆ. ಅಂತಹ ಸಾವಿರಾರು ಜನರು ನಮ್ಮೊಂದಿಗಿದ್ದಾರೆ ಎಂದು ಹೇಳಿದರು.
1988ರಲ್ಲಿ ನಡೆದ ಸರ್ವೆಯಂತೆ ಅಂದು ರಾಜ್ಯದಲ್ಲಿ 13,24,205 ವಿಕಲಚೇತನರಿದ್ದರು. ಆಗ ಕೇವಲ 7 ಅಂಗವಿಕಲತೆಯನ್ನು ಮಾತ್ರ ಪರಿಗಣಿಸಲಾಗುತ್ತಿತ್ತು.ಈಗ 25 ಅಂಗವಿಕಲತೆಯನ್ನು ಗುರುತಿಸುವಂತೆ ಕೇಂದ್ರ ಸೂಚನೆ ಕೊಟ್ಟಿದೆ.ಆ ಸಮೀಕ್ಷೆಗೆ ಚಾಲನೆ ನೀಡಬೇಕಾಗಿದ್ದು, ಇದಕ್ಕೆ ಸರ್ಕಾರ ಸಹಕಾರ ನೀಡಬೇಕು ಎಂದರು.

ವಿಕಲಚೇತನರಿಗೆ ನೀಡಲಾಗುತ್ತಿದ್ದ ಹಿಂದಿನ ಎಲ್ಲಾ ಯೋಜನೆಗಳನ್ನು ಇಂದಿನ ಸರ್ಕಾರ ಮುಂದುವರೆಸುತ್ತಿದೆ. ಟಾಕಿಂಗ್ ಲ್ಯಾಪ್‍ಟಾಪ್, ವಿಮೆ, ಶುಲ್ಕ ಮರುಪಾವತಿ, ಯಂತ್ರ ಚಾಲಿತ ದ್ವಿಚಕ್ರ ವಾಹನ, ವಿವಾಹ ಪೆÇ್ರೀ ಉದ್ಯೋಗದಂತಹ ಯೋಜನೆಗಳನ್ನು ಹೆಚ್ಚು ಹೆಚ್ಚು ಜಾರಿಗೊಳಿಸಲು ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ಗದಗದಿಂದ ಬಂದಿದ್ದ ದೃಷ್ಟಿ ವಿಕಲಚೇತನ ಮಕ್ಕಳು ಮಲ್ಲಕಂಬ ಪ್ರದರ್ಶನ ನೀಡಿ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಶಾಸಕ ಸೋಮಶೇಖರ್, ಎಂಎಲ್‍ಸಿ ಶರವಣ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ