ಪಾಕ್ ಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಖಡಕ್ ತಿರುಗೇಟು

ಪುಣೆ: ಶಾಂತಿ ಮಾತುಕತೆಗೆ ಭಾರತ ಎಂದಿಗೂ ಅಡ್ಡಿ ಪಡಿಸಿಲ್ಲ. ಆದರೆ ಪಾಕಿಸ್ತಾನ ಒಂದು ಕೈಯಲ್ಲಿ ಉಗ್ರರ ಉತ್ತೇಜನ ಮಾಡಿ ಮತ್ತೊಂದು ಕೈಯಲ್ಲಿ ಭಾರತದೊಂದಿಗೆ ಶಾಂತಿ ಮಾತುಕತೆಗೆ ಆಹ್ವಾನ ನೀಡಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಪಾಕಿಸ್ತಾನಕ್ಕೆ ಖಡಕ್ ತಿರುಗೇಟು ನೀಡಿದ್ದಾರೆ.

ಪುಣೆಯಲ್ಲಿ ನಡೆದ ಸೇನಾ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿರುವ ಬಿಪಿನ್ ರಾವತ್, ಪಾಕಿಸ್ತಾನದ ಇಬ್ಬಗೆಯ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ. ಭಾರತ ಶಾಂತಿ ಮಾತುಕತೆಗೆ ಎಂದಿಗೂ ಅಡ್ಡಿ ಪಡಿಸಿಲ್ಲ. ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಮೊದಲು ಜಾತ್ಯಾತೀರಾಗಿ ಎಂದು ಹೇಳಿದ್ದಾರೆ.

ಶಾಂತಿ ಮಾತುಕತೆಗೆ ಬಯಸುತ್ತಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಮೊದಲು ತಮ್ಮ ಆಂತರಿಕ ಪರಿಸ್ಥಿತಿಗಳನ್ನು ಗಮನಿಸಲಿ. ಪಾಕಿಸ್ತಾನ ತನ್ನನ್ನು ತಾನೇ ಇಸ್ಲಾಂ ರಾಷ್ಟ್ರವಾಗಿ ಬಿಂಬಿಸುತ್ತಿದೆ. ಆದರೆ ಭಾರತದೊಂದಿಗೆ ಸಂಬಂಧ ಸುಧಾರಣೆಯಾಗಬೇಕು ಎಂದರೆ ಅದು ಜಾತ್ಯಾತೀತ ರಾಷ್ಟ್ರವಾಗಿ ಬಗದಲಾಗಬೇಕು. ಮೊದಲು ತನ್ನ ನೆಲದ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಆಗ ತಾನೇ ತಾನಾಗಿ ಗಡಿಯಲ್ಲಿ ಶಾಂತಿ ನೆಲೆಸಿ ಭಾರತ-ಪಾಕ್ ನಡುವಿನ ಸಂಬಂಧ ಸುಧಾರಣೆಯಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಭಾರತೀಯ ಸೇನೆಯಲ್ಲಿ ಮಹಿಳಾ ಸೈನಿಕರ ಸಂಖ್ಯೆ ಹೆಚ್ಚುತ್ತಿದೆ ಎಂದು ಮಾಹಿತಿ ನೀಡಿದ ರಾವತ್ ಅವರು, ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಅಂತೆಯೇ ಮುಂದಿನ ದಿನಗಳಲ್ಲಿ ಯುದ್ಧ ಭೂಮಿಯೂ ಸೇರಿದಂತೆ ಸೇನೆಯ ಪ್ರಮುಖ ವಿಭಾಗಗಳಿಗೆ ಮಹಿಳಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.

Army chief Bipin Rawat,Pakistan will have to become a secular country, for good ties

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ