ರೈತರ ಸಾಲ ಮನ್ನಾ, ಸಿ.ಎಂ. ಅವರ ಕನಸು ಈಡೇರುವ ಸಾಧ್ಯತೆ ಕಡಿಮೆ ಅಧಿಕಾರಿಗಳ ಹೇಳಿಕೆ

ಬೆಂಗಳೂರು,ನ.22- 2019ರ ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯದ ರೈತರ ಬೆಳೆ ಸಾಲ ಮನ್ನಾ ಮಾಡಬೇಕೆಂಬ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಕನಸು ಈಡೇರುವ ಸಾಧ್ಯತೆ ಕಡಿಮೆಯಿದ್ದು, ಸಾಲ ಮನ್ನಾವಾಗಲು ಇನ್ನು ಕನಿಷ್ಠ ಎರಡು ವರ್ಷಗಳಾದರೂ ಬೇಕಾಗಬಹುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಬೆಂಗಳೂರು ಗ್ರಾಮೀಣ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿ ಬೆಳೆ ಸಾಲ ಮನ್ನಾವನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದ್ದು, ಈ ವರ್ಷಾಂತ್ಯಕ್ಕೆ ಫಲಾನುಭವಿಗಳೆಲ್ಲರ ಮಾಹಿತಿಯನ್ನು ಸರ್ಕಾರ ಪೂರ್ಣಗೊಳಿಸುವ ಸಾಧ್ಯತೆಯಿದೆ.ಪ್ರಾಯೋಗಿಕ ಬೆಳೆ ಸಾಲ ಮನ್ನಾ ಯೋಜನೆ ಜಾರಿಗೊಳಿಸಿದ್ದು ಹಂತ ಹಂತವಾಗಿ ಮುಂದುವರಿಯುತ್ತಿದೆ.ಬ್ಯಾಂಕುಗಳಿಗೆ ಫಲಾನುಭವಿಗಳ ಪರಿಶೀಲನೆ ಡಿಸೆಂಬರ್ 10ಕ್ಕೆ ಕೊನೆಯಾಗುವ ನಿರೀಕ್ಷೆಯಿದೆ.

ಬೆಳೆ ಸಾಲ ಮನ್ನಾ ಯೋಜನೆ ಜಾರಿಯಲ್ಲಿರುವ ಹಲವು ವಿಷಯಗಳನ್ನು ದಿನನಿತ್ಯದ ಮಾದರಿಯಲ್ಲಿ ಪರಿಶೀಲಿಸಲಾಗುತ್ತಿದೆ.ಬೇರೆ ರಾಜ್ಯಗಳಲ್ಲಿ ರೈತರ ಸಾಲಮನ್ನಾ ಆಗಲು ನಾಲ್ಕು ವರ್ಷಗಳ ಬೇಕಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೇಡಂ ಮತ್ತು ದೊಡ್ಡಬಳ್ಳಾಪುರ ತಾಲ್ಲೂಕುಗಳಲ್ಲಿನ ಬ್ಯಾಂಕು ಅಧಿಕಾರಿಗಳು ಕೂಡ ಯಾವ ರೈತರಿಗೂ ಡಿಸೆಂಬರ್ ಅಂತ್ಯದೊಳಗೆ ಬೆಳೆ ಸಾಲ ಮನ್ನಾ ಆಗಲು ಸಾಧ್ಯವಿಲ್ಲ. ಬೆಳೆಸಾಲದ ಗಾತ್ರ ಮತ್ತು ಮನ್ನಾವಾಗಲು ಇರುವ ಪ್ರಕ್ರಿಯೆ ಹಾಗೂ ರೈತರ ವಿವರಗಳ ಪರಿಶೀಲನೆಯಿಂದ ವಿಳಂಬವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕಳೆದ ಜುಲೈ 5ರಂದು ಮಂಡಿಸಿದ್ದ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ನಲ್ಲಿ ರಾಜ್ಯದ ರೈತರ ಬೆಳೆ ಸಾಲ ಮನ್ನಾ ಬಗ್ಗೆ ಕುಮಾರಸ್ವಾಮಿ ಘೋಷಿಸಿದ್ದರು.ಇದರಿಂದ 28 ಲಕ್ಷ ರೈತರಿಗೆ ಸಹಾಯವಾಗಲಿದೆ ಎಂದು ಕೂಡ ಹೇಳಿದ್ದರು.
2019ರ ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸಿಕೊಳ್ಳಲು ರೈತರ ಸಾಲಮನ್ನಾ ಉತ್ತಮ ಮಾರ್ಗ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಅವರ ತಂದೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ರಾಜಕೀಯ ಲೆಕ್ಕಾಚಾರವಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ