ರೆಬಲ್ ಸ್ಟಾರ್ ಅಂಬಿ ಆಪ್ತರಿಗೆ ಮಂಡ್ಯದಲ್ಲಿ ಕೆಪಿಸಿಸಿ ಶಾಕ್ !

ಮಂಡ್ಯ: ರೆಬಲ್ ಸ್ಟಾರ್ ಹಾಗೂ ಮಾಜಿ ಸಚಿವ ಅಂಬರೀಶ್ ರಾಜಕೀಯದಿಂದ ದೂರ ಉಳಿದ ಬೆನ್ನಲ್ಲೇ ಅವರ ಆಪ್ತರಿಗೆ ಕೆಪಿಸಿಸಿ ಶಾಕ್ ನೀಡಿದೆ.

ಹೌದು, ಅಂಬರೀಶ್ ಆಪ್ತ ಲಿಂಗರಾಜು ಅವರನ್ನು ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟು ಕೆಪಿಸಿಸಿ ಆದೇಶ ಹೊರಡಿಸಿದೆ. ಈ ಮೂಲಕ ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ಅವರನ್ನು ನೇಮಿಸಿದೆ.

ಕೆಪಿಸಿಸಿಯ ಈ ನಿರ್ಧಾರಕ್ಕೆ ಶ್ರೀರಂಗಪಟ್ಟಣ ಕೈ ಕಾರ್ಯಕರ್ತರು ಅಸಮಧಾನ ಹೊರ ಹಾಕಿದ್ದಾರೆ. ಅಂಬರೀಶ್ ಅವರು ರಾಜಕೀಯ ತೆರೆಗೆ ಸರಿದ ಹಿನ್ನೆಲೆಯಲ್ಲಿ ಆಪ್ತರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಈ ಬೆಳವಣಿಗೆಯಿಂದಾಗಿ ಕಾಂಗ್ರೆಸ್ ನಾಯಕರು ಮಂಡ್ಯದಲ್ಲಿ ಮಾಜಿ ಸಚಿವ ಅಂಬರೀಶ್ ಬೆಂಬಲಿಗರ ಟಾರ್ಗೆಟ್‍ಗೆ ಮುಂದಾದರಾ? ಅಂಬರೀಶ್ ಆಪ್ತರಿಗೆ ನೀಡಿರುವ ಅಧಿಕಾರ ಬದಲಾವಣೆಗೆ ಕೆಪಿಸಿಸಿಯಲ್ಲಿ ಸಿದ್ಧತೆ ನಡೆದಿದೆಯಾ? ಅಂಬರೀಶ್ ಆಪ್ತರಾಗಿದ್ದಕ್ಕೆ ಲಿಂಗರಾಜು ಅವರನ್ನು ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕೈಬಿಡಲಾಯಿತಾ ಎನ್ನುವುದು ಪಕ್ಷದಲ್ಲಿ ಈಗ ಭಾರೀ ಚರ್ಚೆಯಾಗುತ್ತಿದೆ.

ಉದ್ದೇಶ ಪೂರ್ವಕವಾಗಿ ಅಂಬರೀಶ್ ರಾಜಕೀಯ ಶಕ್ತಿ ಕುಂದಿಸಲು ಕೆಲವು ನಾಯಕರು ಮುಂದಾಗಿದ್ದಾರೆ. ಇದೇ ಉದ್ದೇಶದಿಂದ ಅಂಬಿ ಆಪ್ತರನ್ನು ಟಾರ್ಗೆಟ್ ಮಾಡುತ್ತಿದ್ದು, ಅವರ ಸ್ಥಾನವನ್ನು ಬಲಾಯಿಸಲು ಕೆಲ ಕೆಪಿಸಿಸಿ ನಾಯಕರು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ