ಸೈಕಲ್‌ ಮೇಲೆ ಜೀರ್ಜಿಂಬೆ ಸವಾರಿ

ಕರ್ನಾಟಕದಲ್ಲಿ ಸಿನಿಮಾ ಪೋಸ್ಟರ್‌ಗೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಪ್ರಚಾರಕ್ಕಾಗಿ ಹಲವು ತಂತ್ರಗಳಿಗೆ ಮೊರೆ ಹೋಗಿದ್ದಾರೆ ನಿರ್ಮಾಪಕರು. ಇದೇ ಮಕ್ಕಳ ದಿನಾಚರಣೆಗೆ ಬಿಡುಗಡೆ ಆಗುತ್ತಿರುವ, ‘ಜೀರ್ಜಿಂಬೆ‘ ಸಿನಿಮಾದ ಪ್ರಚಾರಕ್ಕಾಗಿ ವಿಭಿನ್ನ ಬಗೆಯ ಸೈಕಲ್‌ಗಳು ಸಿದ್ಧವಾಗಿವೆ. ಈಗಾಗಲೇ ಹಲವು ಚಿತ್ರಮಂದಿರಗಳಲ್ಲಿ ಮೂವತ್ತು ಹೆಚ್ಚು ಸೈಕಲ್‌ಗಳು ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ.

‘ಇದು ಕೇವಲ ಪ್ರಚಾರದ ತಂತ್ರವಲ್ಲ. ಜೀಜಿಂಬೆ ಸಿನಿಮಾದಲ್ಲಿ ಸೈಕಲ್‌ ಕೂಡ ಮಹತ್ವದ ಪಾತ್ರ ನಿರ್ವಹಿಸಿದೆ. ಹಾಗಾಗಿಯೇ ನಾನಾ ಬಗೆಯ ಸೈಕಲ್‌ಗಳನ್ನು ಬಳಸಿಕೊಂಡು ಪ್ರಚಾರ ಮಾಡುತ್ತಿದ್ದೇವೆ. ಪುಟ್ಟ ಹುಡುಗಿಯೊಬ್ಬಳು ಸೈಕಲ್‌ ನಡೆಸುವುದನ್ನು ಕಲಿಯುವ ಮತ್ತು ಅದಕ್ಕಾಗಿ ಅವಳು ಎಷ್ಟು ಶ್ರಮ ಪಡುತ್ತಾಳೆ ಎಂಬ ರೋಚಕ ಕಥೆಯಿದೆ. ಈ ಸ್ಟೋರಿಯ ಹಿನ್ನೆಲೆ ಇಟ್ಟುಕೊಂಡು ಮೂವತ್ತು ಸೈಕಲ್‌ಗಳನ್ನು ಸಿದ್ಧ ಮಾಡಿದ್ದೇವೆ. ಈಗಾಗಲೇ ಪ್ರೇಕ್ಷಕರನ್ನು ಅವುಗಳು ಆಕರ್ಷಿಸುತ್ತಿವೆ’ ಎಂದಿದ್ದಾರೆ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನಯ್ಯ.

ಥಿಯೇಟರ್‌ ಮುಂದೆ ಇಟ್ಟಿರುವ ಸೈಕಲ್‌ಗಳ ಮುಂದೆ ಪ್ರೇಕ್ಷಕರು ಸೆಲ್ಫಿ ತಗೆದುಕೊಳ್ಳುತ್ತಿದ್ದಾರೆ. ನಟ ರಕ್ಷಿತ್‌ ಶೆಟ್ಟಿ ಕೂಡ ಫೋಟೋ ತಗೆಸಿಕೊಂಡು ಸಂಭ್ರಮಿಸಿದ್ದಾರೆ.

ಅಂದಹಾಗೆ ಇದು ಮಕ್ಕಳ ಕಥೆಯನ್ನು ಆಧರಿಸಿದ ಸಿನಿಮಾ. ಬೆಳದಿಂಗಳ ಬಾಲೆ ಸುಮನ್‌ ನಗರಕರ್‌ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿದ್ದಾರೆ. ಈಗಾಗಲೇ ಇಪ್ಪತ್ತಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ. ರಾಜ್ಯ ಪ್ರಶಸ್ತಿ ಕೂಡ ಪಡೆದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ