ನಾಳೆ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೂರನೆ ಟಿ-20 ಅಂತಾರಾಷ್ಟ್ರೀಯ ಪಂದ್ಯ

ಚೆನ್ನೈ, ನ.10- ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಮೂರನೆ ಟಿ-20 ಅಂತಾರಾಷ್ಟ್ರೀಯ ಪಂದ್ಯ ನಾಳೆ ಚೆನ್ನೈನಲ್ಲಿ ನಡೆಯಲಿದೆ.

ಈಗಾಗಲೇ ಪ್ರವಾಸಿ ತಂಡದ ವಿರುದ್ಧ 2-0 ಗೆಲುವಿನ ಮುನ್ನಡೆಯೊಂದಿಗೆ ಸರಣಿಯನ್ನು ಕೈವಶ ಮಾಡಿಕೊಂಡಿರುವ ಭಾರತ ಮೂರನೆ ಹಣಾಹಣಿಯಲ್ಲಿ ವಿಂಡೀಸ್ ದೈತ್ಯರ ವಿರುದ್ಧ ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ.

ಲಖನೌನಲ್ಲಿ ನಡೆದ ಟಿ-20 ದ್ವಿತೀಯ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮ ಅವರ ಭರ್ಜರಿ ಶತಕದ ಗೆಲುವಿನೊಂದಿಗೆ ಸರಣಿಯನ್ನು ಕೈವಶ ಮಾಡಿಕೊಂಡಿರುವ ಟೀಮ್ ಇಂಡಿಯಾ ನಾಳಿನ ಪಂದ್ಯದಲ್ಲೂ ಜಯ ಸಾಧಿಸಿ ವೈಟ್‍ವಾಷ್ ಮಾಡುವ ಗುರಿ ಹೊಂದಿದೆ.

ಇದೇ ವೇಳೆ ನಾಳಿನ ಪಂದ್ಯದಲ್ಲಿ ಆತಿಥೇಯರ ವಿರುದ್ಧ ಗೆಲುವು ಸಾಧಿಸಿ ಮಾನ ಉಳಿಸಿಕೊಳ್ಳುವ ಕಡೆ ವಿಂಡೀಸ್ ಪಡೆ ಲಕ್ಷ್ಯ ನೆಟ್ಟಿದೆ.
ಚೆನ್ನೈನ ನೆಚ್ಚಿನ ಪುತ್ರ ಎಂದೇ ಪರಿಗಣಿಸಲ್ಪಟ್ಟಿರುವ ಮಹೇಂದ್ರಸಿಂಗ್ ಧೋನಿ ಟಿ-20 ತಂಡದಲ್ಲಿ ಇಲ್ಲದಿರುವುದು ತಮಿಳು ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

ಭಾರತ ಪ್ರವಾಸದಲ್ಲಿರುವ ವಿಂಡೀಸ್ ಈಗಾಗಲೇ ಟೆಸ್ಟ್ ಮತ್ತು ಏಕದಿನ ಪಂದ್ಯಾವಳಿಗಳಲ್ಲೂ ಸೋತು ಸುಣ್ಣವಾಗಿದೆ. ಟಿ-20ಯಲ್ಲಿ ತಿರುಗೇಟು ನೀಡುವ ಗುರಿ ಹೊಂದಿದ್ದ ಪ್ರವಾಸಿ ತಂಡಕ್ಕೆ ಚುಟುಕು ಪಂದ್ಯಗಳಲ್ಲೂ ತೀವ್ರ ನಿರಾಸೆಯಾಯಿತು.

ನಾಳೆ ನಡೆಯುವ ಪಂದ್ಯದಲ್ಲಿ ಚೆನ್ನೈನ ಎಂ.ಎಸ್.ವಾಷಿಂಗ್ಟನ್ ಸುಂದರ್ ಮತ್ತು ಶ್ರೇಯಸ್ ಅಯ್ಯರ್‍ಗೆ ಅವಕಾಶ ಲಭಿಸಿರುವುದು ತಮಿಳುನಾಡು ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದೆ.

ಕ್ಲೀನ್‍ಸ್ವಿಪ್ ಗುರಿ ಹೊಂದಿರುವ ಭಾರತ ಹಾಗೂ ಕೊನೆ ಪಂದ್ಯವನ್ನಾದರೂ ಗೆಲ್ಲಬೇಕೆಂಬ ಛಲ ಹೊಂದಿರುವ ವೆಸ್ಟ್ ಇಂಡೀಸ್‍ಗೆ ನಾಳಿನ ಪಂದ್ಯ ಮಹತ್ವದ್ದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ