ಕರ್ನಾಟಕದಲ್ಲಿಯೂ ವಿಚ್ಛಿದ್ರಕಾರಕ ಶಕ್ತಿಗಳು ನಿಧಾನವಾಗಿ ತಳ ಊರುತ್ತಿರುವುದು ಅಪಾಯಕಾರಿ: ಹಿರಿಯ ಸಂಶೋಧಕ ಡಾ.ಆರ್.ಶೇಷಶಾಸ್ತ್ರಿ

ಬೆಂಗಳೂರು, ನ.1- ಭಾಷಾವಾರು ರಾಜ್ಯ ರಚನೆಗೆ ಮೊದಲು ಹೋರಾಟ ಮಾಡಿದ ತೆಲುಗರು ರಾಜಕೀಯದಿಂದಾಗಿ ಇಬ್ಭಾಗವಾದರು. ಇದನ್ನು ಹತ್ತಿರದಿಂದ ಕಂಡಿದ್ದೇನೆ. ಕನ್ನಡ ನಾಡು ಹಾಗಾಗಬಾರದು ಎಂಬುದು ಕನ್ನಡಿಗರ ಸಂಕಲ್ಪವಾಗಬೇಕು ಎಂದು ಆಂಧ್ರದ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ, ಹಿರಿಯ ಸಂಶೋಧಕ ಡಾ.ಆರ್.ಶೇಷಶಾಸ್ತ್ರಿ ತಿಳಿಸಿದರು.

ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ವೃತ್ತದಲ್ಲಿರುವ ಬಿಎಂಶ್ರೀ ಪ್ರತಿಮೆ ಎದುರು ಕನ್ನಡ ಗೆಳೆಯರ ಬಳಗ ಏರ್ಪಡಿಸಿದ್ದ ಚಿಂತನ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿಯೂ ವಿಚ್ಛಿದ್ರಕಾರಕ ಶಕ್ತಿಗಳು ನಿಧಾನವಾಗಿ ತಳ ಊರುತ್ತಿವೆ. ಅದನ್ನು ಕಡೆಗಣಿಸಿದರೆ ಅನಾಹುತವಾಗಬಹುದು. ಹಿರಿಯರು ತ್ಯಾಗ, ಬಲಿದಾನಗಳಿಂದ ಕಟ್ಟಿದ ಏಕೀಕೃತ ಕರ್ನಾಟಕವನ್ನು ಉಳಿಸುವ ದೃಢ ಸಂಕಲ್ಪವನ್ನು ಮಾಡೋಣ ಎಂದು ಅವರು ಕರೆ ನೀಡಿದರು.

ಸಾಹಿತಿ ಡಾ.ಎಂ.ಚಿದಾನಂದಮೂರ್ತಿ ಮಾತನಾಡಿ, ನಿನ್ನೆಯನ್ನು ಮರೆತವರು ಇಂದು ಬಾಳಲಾರರು, ಮುಂದೆ ಬೆಳೆಯಲಾರರು ಎಂಬ ಮಾತು ನಮಗೆ ಆದರ್ಶವಾಗಬೇಕಾಗಿದೆ. ಆದ್ದರಿಂದ ಕನ್ನಡ ಯುವ ಜನತೆಗೆ ಕನ್ನಡ ನಾಡಿನ ಭವ್ಯ ಸಾಂಸ್ಕøತಿಕ ಚರಿತ್ರೆಯನ್ನು ಪರಿಚಯಿಸಬೇಕಿದೆ ಎಂದರು.
ಕಾವೇರಿಯಿಂದ ಗೋದಾವರಿವರೆಗೆ ಇದ್ದ ನಾಡು ನಮ್ಮದು ಎಂದು ಹೆಮ್ಮೆ ಮಾತ್ರವಲ್ಲದೆ, ಇಂದಿಗೂ ಅಲ್ಲಿ ಹಳೆಗನ್ನಡ ಮಾತನಾಡುವ ಬುಡಕಟ್ಟು ಜನಾಂಗವಿದೆ. ಹಾಗಾಗಿ ರಾಜ್ಯೋತ್ಸವದ ದಿನ ನಾನು ಭವ್ಯ ಪರಂಪರೆಯೊಂದರ ವಾರಸುದಾರರು ಎಂಬುದನ್ನು ಮರೆಯಬಾರದು. ಅದನ್ನು ವಿಶ್ವಕ್ಕೆ ತಿಳಿಸುವ ಕೆಲಸವಾಗಬೇಕಿದೆ ಎಂದರು.

ಚಿಂತಕ ಪೆÇ್ರ.ತೀನಂ.ಶಂಕರನಾರಾಯಣ ಮಾತನಾಡಿ, ಕರ್ನಾಟಕವು ರಾಷ್ಟ್ರದಲ್ಲೇ ಭಾಷಾ ಸಂಸ್ಕøತಿಗೆ ಅತಿ ಹೆಚ್ಚು ಹಣ ವ್ಯಯಿಸುತ್ತಿರುವ ರಾಜ್ಯವಾಗಿದೆ. ಆದರೂ ಕನ್ನಡಕ್ಕೆ ಈ ಹೀನ ಸ್ಥಿತಿ ಏಕಿದೆ ಎಂಬುದನ್ನು ಪ್ರಜ್ಞಾವಂತರು ರಾಜ್ಯೋತ್ಸವದ ಸಂದರ್ಭದಲ್ಲಿ ಚಿಂತನ ಮಂಥನ ನಡೆಸಬೇಕಿದೆ ಎಂದರು.
ರಾ.ನಂ.ಚಂದ್ರಶೇಖರ್, ಬಿ.ವಿ.ರವಿಕುಮಾರ್, ಕೇಂದ್ರೀಯ ಕನ್ನಡ ಸಂಘದ ಮ.ಚಂದ್ರಶೇಖರ್, ಎಚ್‍ಎಎಲ್ ಕೇಂದ್ರೀಯ ಕನ್ನಡ ಸಂಘದ ಅಧ್ಯಕ್ಷ ಆರ್.ರಾಮಸ್ವಾಮಿ, ಶ್ರೀ ಸಾಮಾನ್ಯರ ಕೂಟದ ಶ್ರ.ದೇ.ಪಾಶ್ರ್ವನಾಥ್, ಕನ್ನಡ ಗೆಳೆಯರ ಬಳಗದ ಸಂಚಾಲಕರಾದ ಬಾ.ಹ.ಉಪೇಂದ್ರ, ಎಚ್.ಎನ್.ರಮೇಶ್‍ಬಾಬು ಮತ್ತು ಜಾಕಿ ಸಂಸ್ಥೆಯ ಕಾರ್ಮಿಕರು ಭಾಗವಹಿಸಿದ್ದರು.

ಚಿಂತನ ಸಭೆಗೆ ಮುನ್ನ ತೀ.ನಂ.ಶ್ರೀ ಪ್ರತಿಮೆಗೆ ಡಾ.ತೀ.ನಂ.ಶಂಕರ ನಾರಾಯಣ, ಕುವೆಂಪು ಪ್ರತಿಮೆಗೆ ಸಿ.ಕೆ.ಶಂಕರ್, ಎಚ್.ಎನ್.ಪ್ರತಿಮೆಗೆ ಪೆÇ್ರ.ಸ.ನ.ವಿಶ್ವೇಶ್ವರಯ್ಯ, ಬಿಎಂಶ್ರೀ ಪ್ರತಿಮೆಗೆ ರಮೇಶ್ ಮರಿಯಪ್ಪ ಮಾಲಾರ್ಪಣೆ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ