ರಾಮನಗರ: ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿಯಲು ನಾವು ಕಾರಣರಲ್ಲ: ಸಿಎಂ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು,ನ.1- ರಾಮನಗರದಿಂದ ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿಯಲು ನಾವು ಕಾರಣವಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ 63ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಪಕ್ಷದಿಂದ ಬರುವವರನ್ನು ಬಿಜೆಪಿಯವರು ಯಾವ ರೀತಿ ಪರಿಗಣಿಸುತ್ತಾರೆ ಎಂಬುದಕ್ಕೆ ಚಂದ್ರಶೇಖರ್ ಅವರು ಪಕ್ಷದಿಂದ ಹೊರಬಂದಿರುವುದೇ ತಾಜಾ ಉದಾಹರಣೆ. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಇದ್ದ ಆತುರ-ಕಾತುರ ಈಗ ಬಿಜೆಪಿಯಲ್ಲಿ ಕಾಣುತ್ತಿಲ್ಲ ಎಂದರು.
ಬಿಜೆಪಿಯವರು ಮಾಡುವ ಆರೋಪಗಳಿಗೆ ತಾವು ಪ್ರತಿಕ್ರಿಯಿಸುವುದಿಲ್ಲ ಎಂದ ಅವರು, ಸದಾನಂದಗೌಡ ಅವರು ನನ್ನ ಮೇಲೆ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದರು.

6ನೇ ತಾರೀಖಿನ ನಂತರ ಕುಮಾರಸ್ವಾಮಿ ಅವರು ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ ಎಂಬ ಬಿಜೆಪಿಯ ಹೇಳಿಕೆ ಕುರಿತಂತೆ ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.
ಬಿಜೆಪಿ ಅಭ್ಯರ್ಥಿ ಕಣದಿಂದ ಹಿಂದೆ ಸರಿದ ಮಾತ್ರಕ್ಕೆ ಮೈಮರೆತು ಕೂರಬೇಡಿ. ಕೊನೆಯ ಹಂತದಲ್ಲೂ ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎರಡೂ ಪಕ್ಷಗಳಿಂದ ಹೆಚ್ಚಿನ ಮತ ಪಡೆಯಲು ಶ್ರಮಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಬಿಜೆಪಿ ನಡವಳಿಕೆಯಿಂದಾಗಿ ರಾಮನಗರ ಚುನಾವಣೆ ಅಭ್ಯರ್ಥಿ ಪಕ್ಷದಿಂದ ಹೊರ ಹೋಗಿದ್ದಾರೆ. ನಾವು ಯಾರಿಗೂ ಆಮಿಷವೊಡ್ಡುವ ಅಗತ್ಯವಿಲ್ಲ ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ನಾವು ನಾಮಪತ್ರ ಸಲ್ಲಿಸಿದ ನಂತರ ರಾಮನಗರಕ್ಕೆ ಹೋಗಲಿಲ್ಲ. ಮತ ಕೇಳಲಿಲ್ಲ. ರಾಮನಗರದ ಜನರೇ ನಮ್ಮನ್ನು ಆಯ್ಕೆ ಮಾಡಿದ್ದರು. ಕೊನೆ ಉಸಿರಿರುವರೆಗೂ ರಾಮನಗರ ಜನತೆಯನ್ನು ಸ್ಮರಿಸುತ್ತೇನೆ ಎಂದು ಹೇಳಿದರು.
ಟಿಪ್ಪು ಜಯಂತಿ ಆಚರಣೆ ಹಿಂದಿನ ಸರ್ಕಾರದ ಅಧಿಕೃತ ಕಾರ್ಯಕ್ರಮ ಅದನ್ನು ಮುಂದುವರೆಸುತ್ತೇವೆ ಎಂಬ ಕುಮಾರಸ್ವಾಮಿ ಸುಳಿವು ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ