ನಟಿ ಶೃತಿಹರಿಹರನ್ ವಿರುದ್ಧ ಅರ್ಜುನ್‍ಸರ್ಜಾ ಮಾನನಷ್ಟ ಮೊಕದ್ದಮೆ: ವಿಚಾರಣೆ ನಾಳೆಗೆ ಮುಂದೂಡಿಕೆ

ಬೆಂಗಳೂರು, ಅ.29- ಮೀ ಟೂ ಅಭಿಯಾನದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿರುವ ನಟಿ ಶೃತಿಹರಿಹರನ್ ವಿರುದ್ಧ ಅರ್ಜುನ್‍ಸರ್ಜಾ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ನಾಳೆಗೆ ಮುಂದೂಡಿಕೆಯಾಗಿದೆ.

ಈ ನಡುವೆ ಅರ್ಜುನ್‍ಸರ್ಜಾ ಅವರನ್ನು ಬಂಧಿಸುವಂತೆ ಶೃತಿ ಪರ ವಕೀಲರು ಪೆÇಲೀಸರಿಗೆ ಮನವಿ ಮಾಡಿದ್ದಾರೆ.
ಅರ್ಜುನ್ ಸರ್ಜಾ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಇಂದು ನಗರದ ಮೇಯೋಹಾಲ್‍ನ ಸಿಸಿಎಚ್‍ಹಾಲ್ 22ರಲ್ಲಿ ವಿಚಾರಣೆ ನಡೆಯಿತು. ನ್ಯಾಯಾಧೀಶರಾದ ಬಿ.ನಾರಾಯಣಪ್ಪ ಅವರು ವಿಚಾರಣೆ ಆರಂಭಿಸುತ್ತಿದ್ದಂತೆ ಶೃತಿ ಪರ ವಕೀಲರಾದ ಜೈನಾಕೊಠಾರಿ ಸಮಯಾವಕಾಶ ಕೇಳಿದರು.

ಅರ್ಜುನ್‍ಸರ್ಜಾ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಮತ್ತು ಶೃತಿ ಅವರಿಗೆ ನಿರ್ಬಂಧ ವಿಧಿಸುವಂತೆ ಸಲ್ಲಿಸಲಾಗಿರುವ ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕಿದೆ ಎಂದು ನ್ಯಾಯಾಧೀಶರಿಗೆ ಮನವಿ ಮಾಡಿಕೊಂಡರು. ಹೀಗಾಗಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಯಿತು.
ಈ ನಡುವೆ ಶೃತಿ ಪರ ಮತ್ತೊಬ್ಬ ವಕೀಲರಾದ ಅನಂತನಾಯಕ್ ಅವರು ಕಬ್ಬನ್‍ಪಾಕ್ ಪೆÇಲೀಸರನ್ನು ಭೇಟಿ ಮಾಡಿ ನಟ ಅರ್ಜುನ್ ಸರ್ಜಾ ಅವರನ್ನು ಬಂಧಿಸುವಂತೆ ಮನವಿ ಮಾಡಿದ್ದಾರೆ.

ನಟಿ ಶೃತಿಹರಿಹರನ್ ಮಾಡಿರುವ ಆರೋಪ ಆಧರಿಸಿ ಕೇಸು ದಾಖಲಿಸಲಾಗಿದೆ. ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಬೇಕು. ಇಲ್ಲವಾದರೆ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಆರೋಪಿಗಳ ಬಂಧನದ ಹೊರತಾಗಿ ಪಾರದರ್ಶಕವಾದ ತನಿಖೆ ನಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.
ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಶೃತಿ ಅವರ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆ ನೀಡುವವರ ಮೇಲೆ ಕ್ರಮ ಕೈಗೊಳ್ಳುವಂತೆ ಶೃತಿಹರಿಹರನ್ ಮ್ಯಾನೇಜರ್ ಸೈಬರ್ ಕ್ರೈಂಗೆ ದೂರು ನೀಡಲು ಮುಂದಾಗಿದ್ದಾರೆ.

ಶೃತಿಹರಿಹರನ್ ಮತ್ತು ಅರ್ಜುನ್‍ಸರ್ಜಾ ಅವರ ನಡುವಿನ ವಿವಾದ ನ್ಯಾಯಾಲಯದ ಮೆಟ್ಟಿಲೇರಿದೆ. ಹೀಗಿದ್ದರೂ ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಶೃತಿ ಅವರ ವಿರುದ್ಧ ಅಸಭ್ಯವಾದ ಮಾತುಗಳನ್ನು ಬಳಸಿ ಆರೋಪ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡುವುದಾಗಿ ಶೃತಿಹರಿಹರನ್ ಅವರ ಮ್ಯಾನೆಜರ್ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ