ವಿದೇಶಿ ಬಂಡವಾಳ ಹೂಡಿಕೆ ಅಪಾಯಕಾರಿ ಬೆಳವಣಿಗೆ ಡಾ.ಬರಗೂರು ರಾಮಚಂದ್ರಪ್ಪ

ಬೆಂಗಳೂರು, ಅ.24- ವಿದೇಶಿ ಬಂಡವಾಳ ಹೂಡಿಕೆ-ಎಫ್‍ಡಿಐಗೆ ಅವಕಾಶ ಮಾಡಿಕೊಟ್ಟ ಪರಿಣಾಮ, ದೇಶದ ರಕ್ಷಣಾ ಇಲಾಖೆ ಸೇರಿದಂತೆ ಹಲವು ಸಾರ್ವಜನಿಕ ವಲಯಗಳನ್ನು ವಿದೇಶಿಗರು ನೇರವಾಗಿ ಗುತ್ತಿಗೆ ಪಡೆದಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ ಹಿರಿಯ ಸಾಹಿತಿ ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.

ನಗರದಲ್ಲಿಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಆಯೋಜಿಸಿದ್ದ, ಖಾಯಮೇತರ ಕೆಲಸಗಳು-ಉದ್ಯೋಗದ ಹಕ್ಕು ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಶ್ರಮಕ್ಕೆ ಪ್ರತಿಫಲವಾಗಿರುವ ಅನ್ನ, ಮೂಲಸೌಕರ್ಯ ಹಾಗೂ ಕಲ್ಯಾಣ ಕಾರ್ಯಗಳನ್ನು ರೂಪಿಸುವ ಆರ್ಥಿಕ ನೀತಿಯನ್ನು ದೇಶದಲ್ಲಿ ರೂಪಿಸಬೇಕು.ಆಗ ಮಾತ್ರ ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ದೇಶದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಹಣದ ಆರ್ಥಿಕ ನೀತಿ ಹಣವನ್ನು ದುಪ್ಪಟ್ಟು ಮಾಡುವ ವ್ಯವಸ್ಥೆಯೇ ಹೊರತು ಇದರಲ್ಲಿ ಎಲ್ಲರಿಗೂ ಸಮಾನವಾದ ಸೌಲಭ್ಯ ಸಿಗುವುದಿಲ್ಲ. ಶ್ರಮವನ್ನು ಗುರುತಿಸುವ ಆರ್ಥಿಕ ನೀತಿ ದೇಶಕ್ಕೆ ಅಗತ್ಯವಿದೆ ಎಂದು ಹೇಳಿದರು.

ಖಾಸಗೀಕರಣ ಮತ್ತು ಖಾಸಗಿ ಆಸ್ತಿ ಹಕ್ಕು ಅನ್ನು ಸಂವಿಧಾನದಲ್ಲಿ ಒತ್ತು ನೀಡಬಾರದೆಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಾಜಿ ಪ್ರಧಾನಿ ಜವಾಹರ್ ನೆಹರು ಹೇಳಿದ್ದರು.ಆದರೆ, ಬಳಿಕ ಬಂದ ನಾಯಕರು ಇದಕ್ಕೆ ಮನ್ನಣೆ ನೀಡಿದ ಪರಿಣಾಮ, ಇಂದು ನಾವು ಖಾಸಗೀಕರಣದ ಸವಾಲುಗಳನ್ನು ಎದುರಿಸುತ್ತಿದ್ದೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ದಿಢೀರ್ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಕಾರಣ, ದೇಶದಲ್ಲೆಡೆ, ಬರೋಬ್ಬರಿ, 2.30 ಲಕ್ಷ ಸಣ್ಣ ಕೈಗಾರಿಕೆಗಳು ನಾಶವಾಗಿದ್ದು, 70 ಲಕ್ಷ ಉದ್ಯೋಗ ಕಣ್ಮರೆಯಾಯಿತು.ಇದಕ್ಕೆ ಬೃಹತ್ ಬಂಡವಾಳಶಾಹಿಗಳೇ ಕಾರಣ.ಈ ಸತ್ಯವನ್ನು ನಾನು ಹೇಳುತ್ತಿಲ್ಲ, ಇದನ್ನು ಆರ್ ಬಿಐ ವರದಿ ಬಿಡುಗಡೆ ಮಾಡಿದೆ ಎಂದು ಬರಗೂರು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿಯೇ ದೇಶ ವ್ಯಾಪ್ತಿ 50ಲಕ್ಷ ಉದ್ಯೋಗ ಖಾಲಿ ಇದೆ. ಹಾಗಾಗಿ, ಕೇಂದ್ರ-ರಾಜ್ಯ ಸರ್ಕಾರಗಳೆರಡು, ಉದ್ಯೋಗ ನೀತಿ ರಚಿಸಬೇಕು.ಈ ನಿಟ್ಟಿನಲ್ಲಿ ಎಲ್ಲಾ ವಲಯದ ಅಸಂಘಟಿತ ಕಾರ್ಮಿಕರು ಹೋರಾಟ ನಡೆಸಬೇಕಾದ ಅಗತ್ಯತೆ ಇದೆ ಎಂದರು.

ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಮಾತನಾಡಿ, ರಾಜ್ಯದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸುವ ಕರಡು ವರದಿ ಸಿದ್ಧವಾಗಿದೆ.ಆದರೆ, ರಾಜ್ಯ ಸರ್ಕಾರ ಅಡಿಯಲ್ಲಿರುವ ನೌಕರರಿಗೆ ಪ್ರಯೋಜನ ಆಗಿಲ್ಲ ಎಂದ ಅವರು, ವಿಶ್ವವಿದ್ಯಾಲಯ, ಬೆಸ್ಕಾಂ ಸೇರಿದಂತೆ ಹತ್ತಾರು ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳುತ್ತೀರುವುದು ಬೇಸರ ತಂದಿದೆ ಎಂದು ನುಡಿದರು.

2001ರ ಐಎಲ್‍ಓ ವರದಿ ಅನ್ವಯ ಜಗತ್ತಿನ ಮೂರರ ಒಂದರಷ್ಟು ಭಾಗ, ಶ್ರಮಿಕರು ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ.ಆದರೆ, ಸರ್ಕಾರಗಳು ಇದುವರೆಗೂ ಎಚ್ಚೆತ್ತುಕೊಂಡಿಲ್ಲ ಎಂದು ವಿಷಾದಿಸಿದರು.

ವಿಚಾರ ಸಂಕಿರಣದಲ್ಲಿ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಎಂ.ಎನ್.ಮೀನಾಕ್ಷಿ ಸುಂದರಮ್, ಪೆÇ್ರ.ಟಿ.ಆರ್.ಚಂದ್ರಶೇಖರ್, ಹುಬ್ಬಳ್ಳಿ ಕಾನೂನು ವಿವಿಯ ಪ್ರಾಧ್ಯಾಪಕ ಡಾ.ಶರತ್ ಬಾಬು, ಕಾರ್ಮಿಕ ಮುಖಂಡ ವಿಜೆಕೆ ನಾಯರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ