ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿವಾದ: ಸಚಿವೆ ಸ್ಮೃತಿ ಇರಾನಿ ಹೇಳಿದ್ದೇನು…?

ಮುಂಬೈ: ನಮಗೆ ದೇವಸ್ಥಾನದಲ್ಲಿ ಪ್ರಾರ್ಥನೆಗೊಳಿಸುವ ಹಕ್ಕಿದೆ ಆದರೆ ಅದನ್ನು ಅಪವಿತ್ರಗೊಳಿಸುವ ಹಕ್ಕಿಲ್ಲ ಎಂದು ಹೇಳಿರುವ ಸಚಿವೆ ಸ್ಮೃತಿ ಇರಾನಿ, ನಾನೊಬ್ಬ ಕೇಂದ್ರ ಸಚಿವೆಯಾಗಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೂ ಅವಕಾಶ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪು ಹಿನ್ನಲೆಯಲ್ಲಿ ದೇಶಾದ್ಯಂತ ತೀವ್ರ ಚರ್ಚೆ, ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಮಾತನಾಡಿರುವ ಸಚಿವೆ ಸ್ಮೃತಿ ಇರಾನಿ, ಪ್ರಾರ್ಥನೆಯ ಹಕ್ಕು ಎಂದರೆ ಅಪವಿತ್ರಗೊಳಿಸುವುದಲ್ಲ ಎಂದು ಹೇಳಿದ್ದಾರೆ.

ಸುಪ್ರೀಂ ತೀರ್ಪಿನ ಬಗ್ಗೆ ಟೀಕೆ ಮಾಡಲು ನಾನು ಯಾರೂ ಅಲ್ಲ. ಆದರೆ ರಕ್ತದ ಕಲೆಗಳಿರುವ ನ್ಯಾಪ್ಕಿನ್ ಜತೆ ಸ್ನೇಹಿತರ ಮನೆಗೆ ಹೋದರೆ ಹೇಗೆ ಎಂಬ ಸಾಮಾನ್ಯ ಪರಿಜ್ಞಾನ ಇರಬೇಕು. ನ್ಯಾಪ್ಕಿನ್ ಜತೆ ಸ್ನೇಹಿತರ ಮನೆಗೆ ಹೋಗಲು ನಮ್ಮಿಂದ ಸಾಧ್ಯವಿಲ್ಲ ಎಂದ ಮೇಲೆ ದೇವಸ್ಥಾನಕ್ಕೆ ಹೋಗುವುದು ಸರಿಯೇ? ನಮಗೆ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕು ಇದೆ. ಆದರೆ ಅದನ್ನು ಅಪವಿತ್ರಗೊಳಿಸುವ ಹಕ್ಕು ಇಲ್ಲ ಎಂದು ಮಾರ್ಮಿಕವಾಗಿ ಸ್ಮೃತಿ ಇರಾನಿ ಅಭಿಪ್ರಾಯಪಟ್ಟಿದ್ದಾರೆ.

ಪೂಜಿಸುವುದು ಮತ್ತು ಅಪವಿತ್ರಗೊಳಿಸುವ ವಿಚಾರದ ನಡುವೆ ಬಹಳ ವ್ಯತ್ಯಾಸ ಇದೆ. ಅದನ್ನು ನಾವು ಗುರುತಿಸಿ, ಗೌರವಿಸಬೇಕು ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ