ಬೆಂಗಳೂರಿಗೆ ಕಾಲಿಟ್ಟ ಖಡಕ್​ ಅಧಿಕಾರಿ ಅಣ್ಣಾಮಲೈ; ಮಧ್ಯರಾತ್ರಿ ಐಪಿಎಸ್​ ವರ್ಗಾವಣೆ ಆಗಿದ್ಯಾಕೆ?

ಬೆಂಗಳೂರುಉಡುಪಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಮಾಜಘಾತುಕ ಶಕ್ತಿಗಳ ವಿರುದ್ಧ ಸಮರ ಸಾರಿದ್ದ ಖಡಕ್​ ಐಪಿಎಸ್​ ಅಧಿಕಾರಿ ಎಸ್​ಪಿ ಅಣ್ಣಾಮಲೈರಾಜ್ಯ ರಾಜಧಾನಿಗೆ ಕಾಲಿಡುವ ಕಾಲ ಸನ್ನಿಹಿತವಾಗಿದೆ. ರಾತ್ರೋರಾತ್ರಿ ಐಪಿಎಸ್​ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದ್ದು, ಅಣ್ಣಾಮಲೈ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ವರ್ಗಾವಣೆಯಾಗಿದ್ದಾರೆ.
ಬೆಂಗಳೂರು ದಕ್ಷಿಣ ವಿಭಾಗದ ಉಪ ಆಯುಕ್ತರಾಗಿ ಅಣ್ಣಾಮಲೈ ಅವರನ್ನು ನೇಮಿಸಲಾಗಿದೆ. ಹಿರಿಯ ಐಪಿಎಸ್​ ಅಧಿಕಾರಿ ಹರಿಶೇಖರನ್ – ಸಂಚಾರಿ ಹೆಚ್ಚುವರಿ ಪೊಲೀಸ್ ಆಯುಕ್ತರು, ಅಜಯ್ ಹಿಲೋರಿ – 1ನೇ ಬೆಟಾಲಿಯನ್ ಕೆಎಸ್​ಆರ್​ಪಿ, ರಾಹುಲ್ ಕುಮಾರ್ – ಪೂರ್ವ ವಿಭಾಗದ ಡಿಸಿಪಿ, ಬೆಂಗಳೂರು ನಗರ, ಹರೀಶ್ ಪಾಂಡೆ – ಚಿಕ್ಕಮಗಳೂರು ಎಸ್ಪಿ ಆಗಿ ವರ್ಗಾವಣೆಯಾಗಿದ್ದಾರೆ.
ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಪೊಲೀಸ್​ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆಯಾದರೂ ಅದು ಗೃಹ ಸಚಿವ ಡಾ. ಜಿ. ಪರಮೇಶ್ವರರ ಗಮನಕ್ಕೆ ಬಂದಿರಲಿಲ್ಲ. ಗೃಹ ಸಚಿವರಿಗೆ ನೆಪಕ್ಕೂ ಒಂದು ಮಾತು ಹೇಳದೇ ಪದ್ಮನಾಭನಗರದಿಂದ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ವರ್ಗಾವಣೆ ಆದೇಶ ಮಾಡಿದ್ದರು. ಇದರಿಂದ ಬೇಸರಗೊಂಡಿದ್ದ ಪರಮೇಶ್ವರ್​ ಸಮನ್ವಯ ಸಮಿತಿ ಸಭೆಯಲ್ಲಿ ತಮ್ಮ ನೋವು ತೋಡಿಕೊಂಡಿದ್ದರು.
ಗೃಹ ಇಲಾಖೆಯ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ ಮಾಡುವಾಗ ಗಮನಕ್ಕಾದರೂ ತೆರಬೇಕಿತ್ತು ಎಂದು ಸಮನ್ವಯ ಸಮಿತಿ ಕುಮಾರಸ್ವಾಮಿಯವರ ಮೇಲೆ ಚಾಟಿ ಬೀಸಿತ್ತು. ಈ ಕಾರಣಕ್ಕಾಗಿಯೇ ಪರಮೇಶ್ವರ್​ ಅವರು ಇದೀಗ ರಾತ್ರೋರಾತ್ರಿ ವರ್ಗಾವಣೆ ಆದೇಶ ಹೊರಡಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಒಟ್ಟಿನಲ್ಲಿ ಈ ಮೂಲಕವಾದರೂ ಖಡಕ್​ ಅಧಿಕಾರಿ ಅಣ್ಣಾಮಲೈ ಬೆಂಗಳೂರಿಗೆ ಬರುತ್ತಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ