ಔಷಧ ಅಂಗಡಿ ಬಂದ್ ಮಾಡಿದರೆ ಪರವಾನಗಿ ರದ್ದು ಮಾಡುತ್ತೇನೆ: ಸಚಿವ ಡಿಕೆ ಶಿವಕುಮಾರ್ ಎಚ್ಚರಿಕೆ

ಬೆಂಗಳೂರು: ಮೆಡಿಕಲ್ ಸ್ಟೋರ್ಸ್ ಗಳನ್ನು ಬಂದ್ ಮಾಡಿದರೆ ಅಂತಹ ಅಂಗಡಿಗಳ ಪರವಾನಗಿಯನ್ನು ರದ್ದು ಮಾಡುತ್ತೇನೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಮೆಡಿಕಲ್ ಶಾಪ್ ಬಂದ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, ಸರ್ಕಾರಿ ಆಸ್ಪತ್ರೆಗಳು ಹಾಗೂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಆವರಣದಲ್ಲಿರುವ ಔಷಧ ವ್ಯಾಪಾರ ಮಳಿಗೆಗಳು (ಮೆಡಿಕಲ್ ಸ್ಟೋರ್ಸ್) ಶುಕ್ರವಾರ ಎಂದಿನಂತೆ ಕಾರ್ಯನಿರ್ವಹಿಸಬೇಕು. ಒಂದೊಮ್ಮೆ ಯಾವುದಾದರೂ ಮಳಿಗೆಗಳು ಬಂದ್ ನಲ್ಲಿ ಪಾಲ್ಗೊಂಡಿದ್ದೇ ಆದಲ್ಲಿ, ಅಂತಹ ಮಳಿಗೆಗಳ ಪರವಾನಗಿ ರದ್ದುಪಡಿಸಿ, ಸರ್ಕಾರಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಆವರಣದಿಂದ ತೆರವು ಮಾಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಗತ್ಯ ಸೇವಾ ಕಾಯ್ದೆ ವ್ಯಾಪ್ತಿಯಲ್ಲಿ ಬರುವ ಔಷಧ ಮಳಿಗೆಗಳು ಯಾವುದೇ ಕಾರಣಕ್ಕೂ ಬಂದ್ ನಲ್ಲಿ ಭಾಗವಹಿಸುವಂತಿಲ್ಲ. ಭಾಗವಹಿಸಿದರೆ ಕಠಿಣ ಕ್ರಮ ಎದುರಿಸಬೇಕಾದೀತು ಎಂದು ತಿಳಿಸಿದ್ದಾರೆ.

ಬಂದ್ ಯಾಕೆ?
ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರಲು ಹೊರಟಿರುವ ಇ-ಫಾರ್ಮಸಿ ವ್ಯವಸ್ಥೆಗೆ, ವಿರೋಧ ವ್ಯಕ್ತಪಡಿಸಿರುವ ಔಷಧಿ ಮಾರಾಟ ವ್ಯಾಪಾರಿಗಳು ಇಂದು ದೇಶಾದ್ಯಂತ ಬಂದ್‍ಗೆ ಕರೆ ನೀಡಿದ್ದಾರೆ. ಹೀಗಾಗಿ ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮಧ್ಯರಾತ್ರಿಯವರೆಗೆ ದೇಶದ ಯಾವುದೇ ಮೆಡಿಕಲ್ ಶಾಪ್‍ಗಳು ಕಾರ್ಯನಿರ್ವಹಿಸುತ್ತಿಲ್ಲ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ