ಮಸೀದಿ ಸ್ಥಳಾಂತರದಿಂದ ನಮಾಜ್ ಗೆ ಧಕ್ಕೆಯಾಗಲ್ಲ: ಸುಪ್ರೀಂ ಐತಿಹಾಸಿಕ ತೀರ್ಪು

ನವದೆಹಲಿ: ಬಾಬ್ರಿ ಮಸೀದಿ ಹಾಗೂ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಐತಿ ಹಾಸಿಕ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಮಸೀದಿ ಸ್ಥಳಾಂತರದಿಂದ ನಮಾಜಿಗೆ ಧಕ್ಕೆಯಾಗಲ್ಲ. ನಮಾಜೀಗೆ ಮಸೀದಿಯೇ ಬೇಕೆಂದಿಲ್ಲ. ಎಲ್ಲಿ ಬೇಕಾದರೂ ನಮಾಜ್ ಮಾಡಬಹುದು ಎಂದು ತೀರ್ಪು ನೀಡುವ ಮೂಲಕ 1994ರ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.

ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಾಗಿಲ್ಲ ಎಂದಿದ್ದ ಇಸ್ಮಾಯಿಲ್ ಫಾರೂಕಿ ತೀರ್ಪಿನ ಪರಿಶೀಲನೆ ಸಂಬಂಧ ಮಹತ್ವದ ತೀರ್ಪು ಪ್ರಕಟಿಸಿರುವ ಮುಖ್ಯ ನ್ಯಾ. ದೀಪಕ್ ಮಿಶ್ರ, ಅಶೋಕ್ ಭೂಷನ್, ನ್ಯಾ. ನಜೀರ್ ಅವರಿದ್ದ ತ್ರಿಸದಸ್ಯ ಪೀಠ, ಮಸೀದಿಯು ಇಸ್ಲಾಮ್ ನ ಅವಿಭಾಜ್ಯ ಅಂಗವಲ್ಲ. ಮಸೀದಿಗೆ ಪ್ರತ್ಯೇಕ ಮಾನದಂಡ ಇಲ್ಲ. ಮಸೀದಿ, ಮಂದಿರ ಚರ್ಚ್ ಗಳಿಗೆ ಭೂಮಿ ಸ್ವಾಧೀನ ಪಡಿಸಿಕೊಳ್ಳಬಹುದು ಎಂದು ಹೇಳಿ 1994 ರ ಫಾರೂಕಿ ಪ್ರಕರಣದ ತೀರ್ಪನ್ನೇ ಎತ್ತಿ ಹಿಡಿದೆ.

ಅಷ್ಟೇ ಅಲ್ಲದೇ 1994 ರ ಪ್ರಕರಣದ ತೀರ್ಪಿನ ಅಂಶಗಳನ್ನು ಪರಿಶೀಲಿಸಲು ಈ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಅ.29ರಿಂದ ಅಯೋಧ್ಯೆ ರಾಮ ಮಂದಿರ ಜಮೀನು ವಿವಾದದ ವಿಚಾರಣೆ ನಿರಂತರವಾಗಿ ಆರಂಭವಾಗಲಿದೆ ಎಂದು ತಿಳಿಸಿದೆ.

ಇಸ್ಮಾಯಿಲ್‌ ಫಾರುಕಿ ಪ್ರಕರಣದ ತೀರ್ಪಿನ ಪ್ರಶ್ನಾರ್ಹ ಅಂಶಗಳು ಅಲಹಾಬಾದ್‌ ಹೈಕೋರ್ಟ್‌ ತೀರ್ಪಿನ ಮೇಲೆ ಪರಿಣಾಮ ಬೀರಿವೆ. ನಮಾಜಿಗೆ ಮಸೀದಿ ಅವಶ್ಯಕವಲ್ಲ ಎಂಬ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ಅವರ ತೀರ್ಪಿಗೆ ನನ್ನ ಸಹಮತವಿಲ್ಲ ಎಂದು ನ್ಯಾಯಮೂರ್ತಿ ಅಬ್ದುಲ್‌ ನಜೀರ್‌ ಹೇಳಿದ್ದಾರೆ.

ಒಟ್ಟಾರೆ ರಾಮಮಂದಿರ ವಿವಾದ ಶೀಘ್ರ ಬಗೆ ಹರಿಯಲಿದ್ದು, ಈ ತೀರ್ಪಿನಿಂದ ವಿವಾದದ ವಿಚಾರಣೆಗೆ ಇದ್ದ ಅಡ್ದಿ ನಿವಾರಣೆಯಾದಂತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ