ಕೊಡುಗು ನಿರಾಶ್ರಿತರಿಗೆ ವಸತಿ ವೆಚ್ಚವಾಗಿ ಮಾಸಿಕ 10 ಸಾವಿರ ರೂ.

ಬೆಂಗಳೂರು, ಸೆ.25- ಭಾರೀ ಮಳೆಯಿಂದ ಮನೆ ಕಳೆದುಕೊಂಡು ನಿರಾಶ್ರಿತರಾಗಿರುವ ಕೊಡುಗು ಜಿಲ್ಲೆಯ ಪ್ರತಿ ಕುಟುಂಬಕ್ಕೆ ವಸತಿ ವೆಚ್ಚವಾಗಿ ಮಾಸಿಕ 10 ಸಾವಿರ ರೂ. ನೀಡಲಾಗುವುದು ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ಸುದ್ದಿಗೋಷ್ಟಿಯನುದ್ದೇಶಿಸಿ ಮಾತನಾಡಿದ ಅವರು, ನಿರಾಶ್ರಿತರಾಗಿರುವ ಕುಟುಂಬಗಳಿಗೆ ಖಾಯಂ ಮನೆ ನೀಡುವವರೆಗೂ ಮಾಸಿಕ 10 ಸಾವಿರ ರೂ.ಗಳನ್ನು ಪ್ರತಿ ಕುಟುಂಬಕ್ಕೆ ನೀಡಲಾಗುವುದು. ಅವರು ಬಾಡಿಗೆ ಮನೆ ಇಲ್ಲವೇ ಸಂಬಂಧಿಕರ ಮನೆಯಲ್ಲಿ ಸ್ವಂತ ಮನೆ ಸಿಗುವವರೆಗೂ ಇರಬಹುದಾಗಿದೆ ಎಂದರು.
ನಿರಾಶ್ರಿತರಿಗೆ ಶೆಡ್ ನಿರ್ಮಾಣ ಮಾಡುವುದನ್ನು ಕೈಬಿಡಲಾಗಿದ್ದು, 6 ಲಕ್ಷ ರೂ. ವೆಚ್ಚದಲ್ಲಿ ಮಾದರಿ ಮನೆ ನಿರ್ಮಾಣ ಮಾಡುವ ಉದ್ದೇಶವಿದೆ.

ಫಲಾನುಭವಿಗಳು ಮನೆ ನಿರ್ಮಿಸಿಕೊಂಡರೂ ರಾಜೀವ್‍ಗಾಂಧಿ ವಸತಿ ನಿಗಮದ ಪರಿಶೀಲನೆಗೊಳಪಟ್ಟು 6 ಲಕ್ಷ ರೂ. ನೀಡಲಾಗುವುದು. ಮನೆ ಇಲ್ಲದೆ ನಿರಾಶ್ರಿತರಾಗಿರುವ ಸುಮಾರು 700-800 ಕುಟುಂಬಗಳು ಇರಬಹುದು ಎಂದರು.

ರಾಜೀವ್ ಗಾಂಧಿ ವಸತಿ ನಿಗಮದಿಂದ ಮತ್ತು ಖಾಸಗಿಯವರಿಂದಲೂ ಇದೇ ವೆಚ್ಚದಲ್ಲಿ ಮನೆ ನಿರ್ಮಿಸುವ ಕಡೆ ಗಮನ ಹರಿಸಲಾಗಿದೆ ಎಂದರು.
ರಾಜೀವ್ ಗಾಂಧಿ ವಸತಿ ನಿಗಮದಿಂದ ಮಂಜೂರಾಗಿದ್ದ ಮನೆಗಳ ಫಲಾನುಭವಿಗಳು ನಿಗದಿತ ಸಮಯದಲ್ಲಿ ಮನೆ ನಿರ್ಮಾಣದ ಪ್ರಗತಿಯ ವಿವರಗಳನ್ನು ಅಪ್‍ಲೋಡ್ ಮಾಡದವರಿಗೆ ಸೆ.5ರಿಂದ 25ರ ನಡುವೆ ಒಂದು ಬಾರಿ ಅವಕಾಶ ಕಲ್ಪಿಸಲಾಗಿತ್ತು.

ರಾಜ್ಯದಲ್ಲಿ 72 ಸಾವಿರ 370 ಮನೆಗಳು ವಿವಿಧ ಹಂತದಲ್ಲಿದ್ದು ,ಅವುಗಳು ಬ್ಲಾಕ್ ಆಗಿದ್ದವು. ಬ್ಲಾಕ್ ತೆಗೆದು ಮನೆ ಪ್ರಗತಿ ವಿವರವನ್ನು ಆನ್‍ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಿದಾಗ 37,508 ಫಲಾನುಭವಿಗಳು ತಮ್ಮ ಮನೆಯ ವಿವರಗಳನ್ನು ಅಪ್‍ಲೋಡ್ ಮಾಡಿದ್ದರು. ಆ ಪೈಕಿ 19,245 ಮನೆಗಳ ವಿವರ ಸರಿಯಾಗಿದ್ದವು.

ಉಳಿದ 18,236 ಮನೆಗಳ ವಿವರ ಸರಿಯಿಲ್ಲದ ಕಾರಣ ತಿರಸ್ಕರಿಸಲಾಗಿದೆ. ಅಲ್ಲದೆ 34,822 ಫಲಾನುಭವಿಗಳು ಈ ಅವಧಿಯಲ್ಲೂ ಯಾವುದೇ ಮಾಹಿತಿಯನ್ನು ಅಪ್‍ಲೋಡ್ ಮಾಡಲಿಲ್ಲ. ಆದರೂ ನಿಜವಾದ ಫಲಾನುಭವಿಗಳು ವಂಚಿತರಾಗಬಾರದು ಎಂಬ ಉದ್ದೇಶದಿಂದ ಅ.15ರವರೆಗೆ ಮತ್ತೊಂದು ಕಾಲಾವಕಾಶ ನೀಡಲಾಗಿದೆ.
ಅಷ್ಟರಲ್ಲಿ ಆಯಾ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದು. ಆ ಅಧಿಕಾರಿಗಳು ಅದನ್ನು ಪರಿಶೀಲಿಸಿ ಸರಿಯಾಗಿದೆ ಎಂದು ಕಳುಹಿಸಿದರೆ ಅಂಥವರಿಗೆ ಮತ್ತೆ ಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡಲು ಮತ್ತೊಂದು ಅವಕಾಶ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ರಾಜ್ಯದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಯಾವುದೇ ಗೊಂದಲಗಳಿಲ್ಲದೆ ಸುಭದ್ರವಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ