ಪರಪ್ಪನ ಅಗ್ರಹಾರದಲ್ಲಿ 2 ದಿನ ಕಳೆದ ದುನಿಯಾ ವಿಜಯ್​

ಬೆಂಗಳೂರು: ಜಿಮ್ ಟ್ರೈನರ್ ಮಾರುತಿ ಗೌಡ ಕಿಡ್ನಾಪ್ ಹಾಗೂ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಸೇರಿರುವ ದುನಿಯಾ ವಿಜಯ್ 2 ದಿನಗಳನ್ನು ಜೈಲಿನಲ್ಲಿ ಕಳೆದಿದ್ದಾರೆ.

ವಿಜಯ್ ಜೊತೆಗೆ ಡ್ರೈವರ್ ಪ್ರಸಾದ್, ಬಾಡಿ ಬಿಲ್ಡರ್ ಪ್ರಸಾದ್​​​, ಕೋಚ್ ಮಣಿ ಕೂಡಾ ಪರಪ್ಪನ ಅಗ್ರಹಾರದಲ್ಲಿ ಸೆರೆವಾಸ ಅನುಭವಿಸುತ್ತಿದ್ದಾರೆ. ನಿನ್ನೆ ಜಾಮೀನು ಸಿಗದ ಹಿನ್ನೆಲೆ ವಿಜಯ್ ಬೇಸರ ವ್ಯಕ್ತಪಡಿಸಿದ್ದಾರೆ. ರಾತ್ರಿ 11 ಗಂಟೆಗೆ ನಿದ್ರೆಗೆ ಜಾರಿದ್ದ ವಿಜಯ್, ಚಿತ್ರರಂಗದಿಂದ ನನ್ನನ್ನು ನೋಡಲು ಯಾರೂ ಬಂದಿಲ್ಲ ಎಂದು ಸಿಬ್ಬಂದಿ ಜೊತೆ ಹೇಳಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಇಂದು ಬೆಳಗ್ಗೆ 5.30ಕ್ಕೆ ಎಚ್ಚರಗೊಂಡ ವಿಜಯ್ ನಿತ್ಯಕರ್ಮಗಳನ್ನು ಮುಗಿಸಿ ಚಾಪೆ ಮೇಲೆ ಬಹಳ ಹೊತ್ತು ಹಾಗೇ ಬೇಸರದಿಂದ ಕುಳಿತಿದ್ದರು ಎಂದು ಜೈಲು ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ನಿನ್ನೆ ಪತ್ನಿ ಕೀರ್ತಿ ಗೌಡ 2 ಗಂಟೆ ಕಾಲ ಮಾತುಕತೆ ನಡೆಸಿ ವಾಪಸಾಗಿದ್ದು, ಇಂದೂ ಕೂಡಾ ಭೇಟಿ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಜಯ್​​​​ ಚಿತ್ರಾನ್ನ ತಿಂದು ನಿನ್ನೆ ಸ್ನೇಹಿತರು ತಂದ ಹಣ್ಣು ಹಂಪಲು ಕೂಡಾ ಸೇವಿಸಿದ್ದಾರೆ. ದಿನಪತ್ರಿಕೆ ಕೇಳಿ ಪಡೆದು ಓದಿದ್ದಾರೆ ಎಂದು ತಿಳಿದುಬಂದಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ