ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಲಕ್ಷ್ಮೀಹೆಬ್ಬಾಳ್ಕರ್

ಬೆಂಗಳೂರು, ಸೆ.23-ಪ್ರಧಾನಿ ನರೇಂದ್ರ ಮೋದಿಯವರ ನಿರಂತರ ಸುಳ್ಳುಗಳಿಂದ ಜನ ಬೇಸತ್ತಿದ್ದಾರೆ. ಅವರು ನೀಡಿರುವ ಯಾವುದೇ ಭರವಸೆ ಈಡೇರಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀಹೆಬ್ಬಾಳ್ಕರ್ ಹೇಳಿದರು.
ಕೆಪಿಸಿಸಿ ಕಚೇರಿಯ ಮುಂಭಾಗದಲ್ಲಿ ನಡೆದ ಮಹಿಳಾ ಕಾಂಗ್ರೆಸ್ ಘಟಕದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಪ್ರಧಾನಮಂತ್ರಿಯವರ ಸುಳ್ಳು ಭರವಸೆಗಳಿಂದ ಜನ ಬೇಸತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್‍ನಲ್ಲಿ ಮಹಿಳೆಯರ ಧ್ವನಿ ಗಟ್ಟಿಗೊಳಿಸಲು ಧ್ವಜವನ್ನು ಅನಾವರಣಗೊಳಿಸಲಾಗಿದೆ. ರಾಜ್ಯಾದ್ಯಂತ ಸಂಚರಿಸಿ ಮಹಿಳೆಯರನ್ನು ಒಟ್ಟುಗೂಡಿಸಿ ಕಾಂಗ್ರೆಸ್ ಬಲ ಹೆಚ್ಚಿಸಲಾಗುವುದು ಎಂದು ಅವರು ಹೇಳಿದರು.
ಬಾಲಿಶಳಲ್ಲ:
ಮೊದಲನೇ ಬಾರಿ ಶಾಸಕಳಾಗಿದ್ದೇನೆ. ಸಚಿವ ಸ್ಥಾನ ಕೇಳುವಷ್ಟು ಬಾಲಿಶಳಲ್ಲ. ಆದರೆ ಉತ್ತರಕರ್ನಾಟಕ ಮಹಿಳೆಯರಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಈ ಬಾರಿ ಸರ್ಕಾರದಲ್ಲಿ ಹೆಚ್ಚಿನ ಅವಕಾಶವಿತ್ತು. ಹಾಗಾಗಿ ಸಚಿವ ಸ್ಥಾನ ಕೇಳಿದ್ದೇನೆ. ಹೈಕಮಾಂಡ್ ನಮ್ಮ ಸೇವೆ ಗಮನಿಸಿ ಸಚಿವ ಸ್ಥಾನ ನೀಡಲಿ ಎಂದ ಅವರು, ಹೆಣ್ಣು ತ್ಯಾಗಮಯಿ. ನಾವು ಹಠಕ್ಕೆ ಬೀಳುವುದಿಲ್ಲ ಎಂದರು.

ನಮಗೆ ಯಾರೂ ಶತ್ರುಗಳಿಲ್ಲ. ನಮ್ಮ ಹೇಳಿಕೆಗಳನ್ನು ಸಂದೇಶ ಎಂದು ಕೊಂಡರೆ ನಾವು ಏನೂ ಮಾಡಲಾಗುವುದಿಲ್ಲ ಎಂದು ಹೇಳಿದರು.
ಬೆಳಗಾವಿ ಭಿನ್ನಮತ ಮುಗಿದುಹೋಗಿದೆ. ನಾಯಕರು ಅದನ್ನು ಬಗೆಹರಿಸಿದ್ದಾರೆ. ಜಿಲ್ಲಾ ರಾಜಕಾರಣದಲ್ಲಿ ಯಾರು ಹಸ್ತಕ್ಷೇಪ ಮಾಡಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ