ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಐಸಿಯು ತೆರೆಯಲು ಸಮ್ಮತಿ

ಬೆಂಗಳೂರು, ಸೆ.6- ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟಗಾಯದ ರೋಗಿಗಳ ಅನುಕೂಲಕ್ಕಾಗಿ ಐಸಿಯು (ತೀವ್ರ ನಿಗಾ ಘಟಕ) ತೆರೆಯಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮ್ಮ್ಮತಿಸಿದ್ದಾರೆ ಎಂದು ಬಿಬಿಎಂಪಿ ವಾರ್ಡ್‍ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಸುಟ್ಟಗಾಯ ಭಾಗಕ್ಕೆ 50 ಬೆಡ್ ಮಾತ್ರ ಇದ್ದು, ಇವುಗಳೂ ಯಾವಾಗಲೂ ರೋಗಿಗಳಿಂದ ತುಂಬಿರುತ್ತವೆ. ಇಲ್ಲಿ ಈ ಭಾಗಕ್ಕೆ ಐಸಿಯು ವ್ಯವಸ್ಥೆ ಇಲ್ಲ. ಪ್ರತಿ ನಿತ್ಯ 8 ರಿಂದ 10 ಮಂದಿ ಬೆಂಕಿ ಅವಘಡಗಳಿಂದ ಸುಟ್ಟಗಾಯಗಳಿಂದ ದಾಖಲಾಗುತ್ತಾರೆ. ಆದ್ದರಿಂದ ಐಸಿಯು ವಿಭಾಗ ತೆರೆಯುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದಾಗ ಅವರು ತಕ್ಷಣ ಸ್ಪಂದಿಸಿ ಎಲ್ಲಾ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು ಎಂದು ಇಮ್ರಾನ್ ಪಾಷ ತಿಳಿಸಿದ್ದಾರೆ.

ಬಿಸಿ ನೀರು ತಗುಲಿ ಸುಟ್ಟ ಗಾಯಗಳಿಂದ ಬಳಲುತ್ತಿರುವ ಆರು ವರ್ಷದ ಬಾಲಕ ಮಹಮ್ಮದ್ ಫೈಜಾನ್ ಎಂಬಾತನ ಚಿಕಿತ್ಸೆಗೆ ಇಮ್ರಾನ್ ಪಾಷ ಅವರು ವೈಯಕ್ತಿಕವಾಗಿ 10 ಸಾವಿರ ರೂ.ಸಹಾಯ ಧನ ನೀಡಿದ್ದಾರೆ. ರಾಯಪುರ ನಿವಾಸಿಯಾದ ಮಹಮ್ಮದ್ ಫೈಜಾನ್ ಮನೆಯಲ್ಲಿ ಜೋಕಾಲಿ ಆಡುತ್ತಿದ್ದಾಗ ಪೆÇೀಷಕರು ಇಟ್ಟಿದ್ದ ಬಿಸಿ ನೀರು ತಗುಲಿ ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ಸೇರಿದ್ದರು. ಈ ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಇಮ್ರಾನ್ ಪಾಷ ಅವರು ತಕ್ಷಣ ವೈಯಕ್ತಿಕವಾಗಿ 10 ಸಾವಿರ ನೆರವು ನೀಡಿ, ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಮನವಿ ಮಾಡಿದ್ದಾರೆ.
ಸಾರ್ವಜನಿಕ ಸ್ಥಳಗಳು ಮತ್ತು ಮನೆಗಳಲ್ಲಿ ಬೆಂಕಿ ಅವಘಡಗಳನ್ನು ತಡೆಗಟ್ಟುವ ಸಂಬಂಧ ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ