ಮಲ್ಲೇಶ್ವರ ವಾಸವೀ ಕನ್ಯಕಾ ಪರಮೇಶ್ವರ ದೇವಸ್ಥಾನದಲ್ಲಿ ಶತ ಚಂಡಿಕಾ ಯಾಗ

ಬೆಂಗಳೂರು, ಸೆ.5- ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಹಳದೀಪುರದಲ್ಲಿರುವ ಶ್ರೀ ಸಂಸ್ಥಾನ ಹಳದೀಪುರ ಶಾಂತಾಶ್ರಮ ಮಠದ ಆಶ್ರಯದಲ್ಲಿ ನಾಳೆ ಮತ್ತು ಸೆ.7ರಂದು ನಗರದ ಮಲ್ಲೇಶ್ವರ ವಾಸವೀ ಕನ್ಯಕಾ ಪರಮೇಶ್ವರ ದೇವಸ್ಥಾನದಲ್ಲಿ ಶತ ಚಂಡಿಕಾ ಯಾಗವನ್ನು ಆಯೋಜಿಸಲಾಗಿದೆ.
ನಾಳೆ ಬೆಳಗ್ಗೆ 8ಕ್ಕೆ ಪ್ರಧಾನ ಸಂಕಲ್ಪ , ಗಣಪತಿ ಪೂಜೆ, ಪುಣ್ಯಾಹ, ಸಪ್ತಶತೀ ಪಾರಾಯಣ ಸಂಜೆ 4.30ಕ್ಕೆ ಪಾರಾಯಣ, ಜಪ, ಅರುಣಿ ಮಥನ ಪೂರ್ವಕ, ಅಗ್ನಿ ಜನನ. ಸೆ.7ರಂದು ಬೆಳಗ್ಗೆ 6.30ರಿಂದ ಶತ ಚಂಡಿಕಾ ಹವನ ಪ್ರಾರಂಭವಾಗುತ್ತದೆ. ಬೆಳಗ್ಗೆ 11ಕ್ಕೆ ವಸೋರ್ಧಾರಾ, ಪೂರ್ಣಾಹುತಿ, ಕುಮಾರಿಕಾ ಪೂಜೆ, ಸುಮಂಗಲಿ ಪೂಜೆ, ಫಲಮಂತ್ರಾಕ್ಷತೆ ಮತ್ತು ಅನ್ನ ಸಂತರ್ಪಣೆ ಇದೆ. ಈ ಮಹಾಯಾಗದಲ್ಲಿ ಭಾಗವಹಿಸಲು ಇಚ್ಛಿಸುವವರು ದೂರವಾಣಿ ಸಂಖ್ಯೆ 9663871717, 9920701145 ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬೆಂಗಳೂರಿನಲ್ಲಿ ಮೊದಲ ಚಾತುರ್ಮಾಸ್ಯ, ಶ್ರೀ ವಾಮನಾಶ್ರಮ ಸ್ವಾಮೀಜಿಯವರು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಚಾತುರ್ಮಾಸ್ಯ ವ್ರತ ಆಚರಿಸುತ್ತಿದ್ದಾರೆ. ಸೆ.25ರವರೆಗೆ ಚಾತುರ್ಮಾಸ್ಯ ನಡೆಯಲಿದ್ದು , ದೇಶದ 300ಕ್ಕೂ ಹೆಚ್ಚು ಪಂಗಡಗಳ ವೈಶ್ಯ ಬಾಂಧವರು ಸ್ವಾಮೀಜಿಯವರಿಂದ ಫಲ-ಮಂತ್ರಾಕ್ಷತೆ ಪಡೆಯಬೇಕು ಎಂದು ಸಂಸ್ಥಾನ ಹಳದೀಪುರ ಮಠದ ಅಧ್ಯಕ್ಷ ಡಾ.ಸೂರತ್ ಕಾಣೇಕರ್ ಮನವಿ ಮಾಡಿದ್ದಾರೆ.
ಶತ ಚಂಡಿಕಾ ಮಹಾ ಯಾಗ ಮಹತ್ವ: ಮಂಗಳ ಸ್ವರೂಪಳಾದ ಚಂಡಿಕೆಯನ್ನು ಸ್ಮರಣೆ ಮಾಡಿ ಶತ ಚಂಡಿಕಾ ಯಾಗ ನಡೆಸುವುದರಿಂದ ಶ್ರೀ ದೇವಿಯು ಸರ್ವ ಇಷ್ಟಾರ್ಥಗಳ ಈಡೇರುತ್ತವೆ. ಇಚ್ಛಾಶಕ್ತಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿಯನ್ನು ದೇವಿಯು ಕರುಣಿಸುತ್ತಾಳೆ ಎಂಬುದು ಆಸ್ತಿಕರ ನಂಬಿಕೆಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ