
ಕೊಳ್ಳೇಗಾಲ, ಆ.31- ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗಲು ಸಾಧ್ಯವೇ ಇಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ಇಂದಿಲ್ಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾರೆ. ಅವರಿಗೆ ನಾನು ಬೆಂಬಲ ನೀಡುತ್ತೇನೆ ಎಂದು ಹೇಳಿದರು.
ಅಭಿವೃದ್ಧಿ ಯೋಜನೆಗಳ ಬಗ್ಗೆ ಕುಮಾರಸ್ವಾಮಿ ಅವರಿಗೆ ಸಾಕಷ್ಟು ಕನಸುಗಳಿವೆ. ಅಂತಹವರಿಗೆ ಅಡಚಣೆ ಉಂಟು ಮಾಡಬಾರದು. ಕಾಂಗ್ರೆಸ್ನವರು ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡಬೇಕು ಎಂದರು.
ಮುಖ್ಯಮಂತ್ರಿಗಳು ದೇವರ ಪೂಜೆ, ದೇವಾಲಯಗಳ ಭೇಟಿಯಲ್ಲೇ ಕಾಲ ಹರಣ ಮಾಡುತ್ತಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ಅವರು ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿದಾಗ ಸ್ಥಳೀಯ ಮುಖಂಡರು ಹಾಗೂ ಅಭಿಮಾನಿಗಳ ಕೋರಿಕೆ ಮೇರೆಗೆ ದೇವಾಲಯಗಳಿಗೆ ಹೋಗಲೇ ಬೇಕಾಗುತ್ತದೆ. ಅದರಲ್ಲಿ ತಪ್ಪೇನಿದೆ ಎಂದು ಮರು ಪ್ರಶ್ನೆ ಕೇಳಿದರು.
ಸಿಎಂ ಹೋದ ಕಡೆಗಳೆಲ್ಲಾ ಆಡಳಿತ ವರ್ಗವೂ ಹೋಗಬೇಕಾಗುತ್ತದೆ. ಆಷಾಢ ಪೂಜೆ ಸಂಬಂಧ ಒಂದೆರೆಡು ದೇವಾಲಯಗಳಿಗೆ ಮಾತ್ರ ಕುಟುಂಬ ಸಮೇತ ಅವರು ಭೇಟಿ ನೀಡಿದ್ದಾರೆ. ಉಳಿದ ಕಡೆ ಅವರೊಬ್ಬರೇ ದೇವರ ದರ್ಶನ ಪಡೆದಿದ್ದಾರೆ. ಈ ಹಿಂದೆ ಸಿದ್ದರಾಮಯ್ಯ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಕಾಲದಲ್ಲೂ ದೇವಾಲಯ ಭೇಟಿ ನಡೆದಿತ್ತು ಎಂದು ಕುಮಾರಸ್ವಾಮಿಯವರ ಟೆಂಪಲ್ ರನ್ನನ್ನು ಸಚಿವ ಮಹೇಶ್ ಸಮರ್ಥಿಸಿಕೊಂಡರು.
ಸ್ಥಳೀಯ ನಗರಸಭೆ ಚುನಾವಣೆಯಲ್ಲಿ ಬಿಎಸ್ಪಿ ಈ ಬಾರಿ ಆಡಳಿತ ಚುಕ್ಕಾಣಿ ಹಿಡಿಯಲಿದೆ. ಇದರಲ್ಲಿ ಎರಡು ಮಾತಿಲ್ಲ ಎಂದ ಅವರು, ಅಭಿವೃದ್ಧಿಗಾಗಿ ಬಿಎಸ್ಪಿಯನ್ನು ಬೆಂಬಲಿಸಿ ಎಂದರು.