ತಂಬಾಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು, ಆ.28- ಕ್ಲಬ್, ಬಾರು, ಹೋಟೆಲ್‍ಗಳಲ್ಲಿ ಕಡ್ಡಾಯವಾಗಿ ಸ್ಮೋಕಿಂಗ್ ಜೋನ್ ಇರಲೇಬೇಕು. ಜತೆಗೆ ಶಾಲಾ-ಕಾಲೇಜು ಆವರಣದ 100 ಮೀಟರ್ ಒಳಗಿರುವ ಅಂಗಡಿ ಮುಂಗಟ್ಟುಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ನೋಡಿಕೊಳ್ಳಲು ಈ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಮೇಯರ್ ಸಂಪತ್ ರಾಜ್ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದರು.

ಪಾಲಿಕೆ ಸಭೆಯಲ್ಲಿಂದು ತಂಬಾಕು ನಿಯಂತ್ರಣ ಮಂಡಳಿ ಅಧ್ಯಕ್ಷ, ಕ್ಯಾನ್ಸರ್ ತಜ್ಞ ಡಾ.ವಿಶಾಲ್‍ರಾವ್ ಅವರು ಬೀಡಿ, ಸಿಗರೇಟು ಮತ್ತು ತಂಬಾಕು ಉತ್ಪನ್ನ ಸೇವನೆ, ಧೂಮಪಾನ ಹಾಗೂ ಪರೋಕ್ಷವಾಗಿ ಹೊಗೆ ಕುಡಿಯುವುದರಿಂದ ಕ್ಯಾನ್ಸರ್‍ಗೆ ತುತ್ತಾಗುವ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಇವುಗಳ ನಿಯಂತ್ರಣಕ್ಕೆ ಪಾಲಿಕೆ ಅಧಿಕಾರಿಗಳು ಕೈ ಜೋಡಿಸಬೆಕೆಂದು ಮನವಿ ಮಾಡಿದರು.

ಈ ಕುರಿತು ಉದಾಹರಣೆ ನೀಡಿ, ನಳಿನಿಸತ್ಯನಾರಾಯಣ್ ಎಂಬ 70 ವರ್ಷದ ಮಹಿಳೆಗೆ ಪರೋಕ್ಷ ಧೂಮಪಾನದಿಂದ ಗಂಟಲು ಕ್ಯಾನ್ಸರ್ ಬಂದಿದ್ದು, ನಂತರ ಆಕೆಗೆ ಶಸ್ತ್ರ ಚಿಕಿತ್ಸೆ ಮಾಡಿ ಧ್ವನಿಪೆಟ್ಟಿಗೆಯನ್ನೇ ತೆಗೆಯಬೇಕಾಯಿತು. ಗಂಟಲಲ್ಲಿ ರಂದ್ರ ಮಾಡಿ ಅದರ ಮೂಲಕವೇ ಉಸಿರಾಟ ಮಾಡಬೇಕಿದೆ. ಹಾಗಾಗಿ ಧೂಮಪಾನ ಅತ್ಯಂತ ಅಪಾಯಕಾರಿ. ಆದ್ದರಿಂದ ಇನದನ್ನು ತಕ್ಷಣವೇ ನಿಯಂತ್ರಿಸಬೇಕು. ಶಾಲಾ-ಕಾಲೇಜು ಆವರಣದ ಸುತ್ತಮುತ್ತ ತಂಬಾಕು ಉತ್ಪನ್ನ ಮಾರಾಟ ನಿಷೇಧಿಸಬೇಕು ಎಂದು ಕೋರಿದರು.

ಇದಕ್ಕೆ ಪಕ್ಷಾತೀತವಾಗಿ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು. ಆಡಳಿತ ಪಕ್ಷದ ನಾಯಕ ಶಿವರಾಜ್ ಮಾತನಾಡಿ, ಡಾ.ವಿಶಾಲ್‍ರಾವ್ ಉತ್ತಮ ಸಲಹೆ ಕೊಟ್ಟಿದ್ದಾರೆ. ನಾವು ಕೂಡಾ ಬಜೆಟ್‍ನಲ್ಲಿ ತಂಬಾಕು ನಿಯಂತ್ರಣಕ್ಕೆ ಅನುದಾನ ಇಟ್ಟಿದ್ದೇವೆ. ಈ ಅನುದಾನ ಸದ್ಬಳಕೆ ಮಾಡಿಕೊಂಡು ತಂಬಾಕು ಮುಕ್ತ ನಗರ ಮಾಡಬೇಕೆಂದು ಮನವಿ ಮಾಡಿದರು.
ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಮಾತನಾಡಿ, ಕ್ಲಬ್, ಬಾರು, ಹೋಟೆಲ್‍ಗಳಲ್ಲಿ ಸ್ಮೋಕಿಂಗ್ ಜೋನ್ ಇರಬೇಕು. ಯುವ ಜನಾಂಗದ ದಾರಿ ತಪ್ಪಿಸುತ್ತಿರುವ ತಂಬಾಕು ಉತ್ಪನ್ನವನ್ನು ಬ್ಯಾನ್ ಮಾಡಲು ನಿರ್ಣಯ ಕೈಗೊಂಡು ಅದನ್ನು ಸರ್ಕಾರಕ್ಕೆ ಕಳುಹಿಸಬೇಕು. ತಂಬಾಕು ಉತ್ಪನ್ನದಿಂದಾಗುವ ದುಷ್ಪರಿಣಾಮ ಕುರಿತು ಸರ್ಕಾರ ಜಾಹೀರಾತು ಮೂಲಕ ಪ್ರಚಾರ ಮಾಡಿ ಯುವ ಜನತೆ ದಾರಿ ತಪ್ಪದಂತೆ ನೋಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಸದಸ್ಯ ಉಮೇಶ್‍ಶೆಟ್ಟಿ ಮಾತನಾಡಿ, ಶಾಲಾ ಆವರಣದ ಸುತ್ತ 100 ಮೀಟರ್ ಒಳಗೆ ತಂಬಾಕು ಉತ್ಪನ್ನ ಮಾರಾಟ ಮಾಡಬಾರದೆಂಬ ಕಾನೂನು ಇದೆ. ಆದರೂ ಮಾರಾಟ ಮಾಡುತ್ತಿದ್ದಾರೆ. ಗಾಂಜಾ ಕೂಡ ಎಗ್ಗಿಲ್ಲದೆ ಮಾರಟವಾಗುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇವುಗಳನ್ನು ಕಟ್ಟು ನಿಟ್ಟಾಗಿ ನಿಷೇಧಿಸಬೇಕು ಹಾಗೂ ಮಾರಾಟ ಮಾಡುವವರ ಲೈಸೆನ್ಸ್ ರದ್ದು ಪಡಿಸುವಂತೆ ಕೋರಿದರು.

ಜೆಡಿಎಸ್ ಗುಂಪಿನ ನಾಯಕಿ ನೇತ್ರನಾರಾಯಣ್ ಮಾತನಾಡಿ, ಯುವ ಜನರ ಕೈಗೆ ಸುಲಭವಾಗಿ ಗಾಂಜಾ ಸಿಗುತ್ತಿದೆ. ರಾತ್ರಿ ವೇಳೆ ಆಟದ ಮೈದಾನದಲ್ಲಿ ಯುವ ಜನರು ಗುಂಪಾಗಿ ಸೇರಿ ಗಾಂಜಾ ಸೇವಿಸಿ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಕೂಡಲೇ ನಿಯಂತ್ರಿಸಬೇಕೆಂದು ಹೇಳಿದರು.
ಮತ್ತೊಬ್ಬ ಸದಸ್ಯೆ ಲಾವಣ್ಯ ಗಣೇಶ್ ಮಾತನಾಡಿ, ಸ್ಲಮ್‍ಗಳಲ್ಲಿ ತಂಬಾಕು ಉತ್ಪನ್ನಗಳು, ಗಾಂಜಾ ಎಗ್ಗಿಲ್ಲದೆ ಸಿಗುತ್ತಿದೆ. ಇದರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಕೊಳಗೇರಿಗಳಲ್ಲಿ ಹಮ್ಮಿಕೊಳ್ಳಬೇಕೆಂದು ಮನವಿ ಮಾಡಿದರು.
ಶಾಸಕ ಕೆ.ಗೋಪಾಲಯ್ಯ ಮಾತನಾಡಿ, ಗಾಂಜಾ ಸೇವನೆ ಒಂದು ಪಿಡುಗಾಗಿಬಿಟ್ಟಿದೆ. ಪ್ರತಿಷ್ಠಿತ ಶಾಲಾ-ಕಾಲೇಜುಗಳಲ್ಲಿನ ಶ್ರೀಮಂತರ ಮಕ್ಕಳು ಗಾಂಜಾಕ್ಕೆ ದಾಸರಾಗುತ್ತಿದ್ದಾರೆ. ರಾಜಕಾಲುವೆಗಳ ಒಳಗೆ ಇಳಿದು ಅಲ್ಲಿನ ಖಾಲಿ ಪ್ರದೇಶಗಳಲ್ಲಿ ಗಾಂಜಾ ಸೇವಿಸುತ್ತಿದ್ದಾರೆ. ಈ ಪಿಡುಗು ಮತ್ತು ತಂಬಾಕು ಸೇವನೆಯನ್ನು ನಿಷೇಧಿಸಬೇಕೆಂದು ಸಲಹೆ ನೀಡಿದರು.
ಇತ್ತೀಚೆಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪಾಲಿಕೆ ಸದಸ್ಯರ ಸಭೆ ಕರೆದು ಗಾಂಜಾ ನಿಯಂತ್ರಿಸುವುದು ಹೇಗೆ ಎಂಬ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಅದರಂತೆ ಎಲ್ಲಾ 198 ಸದಸ್ಯರು ತಂಬಾಕು, ಗಾಂಜಾ ನಿಯಂತ್ರಣ ಕಾರ್ಯಕ್ಕೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಶಾಲಾ-ಕಾಲೇಜು ಸಮೀಪದ ಅಂಗಡಿ, ಬೇಕರಿಗಳಲ್ಲಿ ಬೀಡಿ, ಸಿಗರೇಟ್, ತಂಬಾಕು ಉತ್ಪನ್ನ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪಕ್ಷ ಭೇದ ಮರೆತು ಎಲ್ಲ ಸದಸ್ಯರು ಒತ್ತಾಯಿಸಿದರು.

ವೈಟ್ನರ್, ನೈಲ್‍ಪಾಲೀಶ್, ಸಲ್ಯೂಷನ್ ವಸ್ತುಗಳನ್ನು ಯುವಜನರು ನಶೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಸದಸ್ಯರು ಇದೇ ವೇಳೆ ಆಗ್ರಹಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಎಚ್‍ಎಸ್‍ಆರ್ ಲೇಔಟ್ ಕಾಪೆರ್Çರೇಟರ್ ಗುರುಮೂರ್ತಿರೆಡ್ಡಿ, ಕೋರಮಂಗಲದ ಚಂದ್ರಪ್ಪ, ಉಮೇಶ್‍ಶೆಟ್ಟಿ ಅವರು ಸಿಗರೇಟ್ ಸೇದುತ್ತಾರೆ. ಪಾಲಿಕೆ ಆವರಣದಲ್ಲೇ ಕೆಲವು ಅಧಿಕಾರಿಗಳು ಧೂಮಪಾನ ಮಾಡುತ್ತಾರೆ. ನಮ್ಮ ಆಫೀಸ್ ಆವರಣದಲ್ಲೇ ನೋ ಸ್ಮೋಕಿಂಗ್ ಬೋರ್ಡ್ ಹಾಕಿಸಬೇಕೆಂದು ಸಲಹೆ ನೀಡಿದರು. ಇದಕ್ಕೆ ಮೇಯರ್ ಸ್ಪಂದಿಸಿ, ಕಾಪೆರ್Çರೇಟರ್‍ಗಳು, ಅಧಿಕಾರಿಗಳು ಇತರರಿಗೆ ಮಾದರಿಯಾಗಬೇಕೆಂದರು.

ಎಲ್ಲರ ಮನವಿ, ಸಲಹೆಗಳನ್ನು ಆಲಿಸಿದ ಮೇಯರ್ ಸಂಪತ್‍ರಾಜ್, ಕ್ಲಬ್, ಬಾರು, ಹೋಟೆಲ್‍ಗಳಲ್ಲಿ ಕಡ್ಡಾಯವಾಗಿ ಸ್ಮೋಕಿಂಗ್ ಜೋನ್ ಇರಲೇಬೇಕು. ಜತೆಗೆ ಶಾಲಾ-ಕಾಲೇಜು ಆವರಣದ 100 ಮೀಟರ್ ಒಳಗಿರುವ ಅಂಗಡಿ ಮುಂಗಟ್ಟುಗಳಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡದಂತೆ ನೋಡಿಕೊಳ್ಳಲು ಈ ಕೂಡಲೇ ಆರೋಗ್ಯಾಧಿಕಾರಿಗಳು, ಹೆಲ್ತ್‍ಇನ್ಸ್‍ಪೆಕ್ಟರ್‍ಗಳು ಕಾರ್ಯಾಚರಣೆಗಿಳಿದು ಸ್ಮೋಕಿಂಗ್ ಜೋನ್ ತೆರೆಯುವ ಬಗ್ಗೆ ಮಾಲೀಕರಲ್ಲಿ ಅರಿವು ಮೂಡಿಸಬೇಕು ಹಾಗೂ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ