
ಕೊಡಗು ಜಿಲ್ಲೆಯ ಪುನರ್ ನಿರ್ಮಾಣಕ್ಕೆ ಕನಿಷ್ಠ 3000 ಕೋಟಿ ರೂ. ಅಗತ್ಯವಿದೆ. ಕನಿಷ್ಠ 2000 ಕೋಟಿ ರೂ. ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದೇವೆ. ಈವರೆಗೆ ಒಂದು ನಯಾಪೈಸೆ ನೆರವನ್ನು ಕೇಂದ್ರ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ ಅವರು, ಕೇರಳ ಸರ್ಕಾರ ನಷ್ಟದ ಅಂದಾಜು ಸಲ್ಲಿಸುವ ಮೊದಲೇ ಅಲ್ಲಿಗೆ 500 ಕೋಟಿ ರೂ. ಹಣವನ್ನು ಕೇಂದ್ರ ಘೋಷಿಸಿದೆ. ಅದೇ ಮಾದರಿಯಲ್ಲಿ ಕರ್ನಾಟಕಕ್ಕೂ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಕೊಡಗು ಜಿಲ್ಲೆಯನ್ನು ನಿರ್ಲಕ್ಷ್ಯಿಸಿದೆ. ಕೇಂದ್ರ ಸರ್ಕಾರ ಎನ್ಡಿಆರ್ಎಫ್ ಮತ್ತು ಸೇನೆಯನ್ನು ಕಳುಹಿಸಿ ಸಹಾಯ ಮಾಡಿದೆ. ಅದನ್ನು ಹೊರತು ಪಡಿಸಿ ಆರ್ಥಿಕ ವಿಚಾರದಲ್ಲಿ ಕೇಂದ್ರ ಸರ್ಕಾರ ನಮಗೆ ಸ್ವಲ್ಪವೂ ಸ್ಪಂದಿಸಿಲ್ಲ. ಕೇರಳಕ್ಕೆ 500 ಕೋಟಿ ರೂ.ಕೊಟ್ಟಂತೆ ನಮಗೂ ಕೇಂದ್ರ ಹಣ ಸಹಾಯ ಮಾಡಬೇಕು ಎಂದು ಪರಮೇಶ್ವರ್ ಒತ್ತಾಯಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ಸಂಸದರ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ದು ರಾಜ್ಯಕ್ಕೆ ನೆರವು ನೀಡಬೇಕಿತ್ತು. ಆದರೆ ಅವರು ವಿಳಂಬವಾಗಿ ಬಂದು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಕಿಡಿಕಾರಿರುವುದು ಸರಿಯಲ್ಲ ಎಂದು ಹೇಳಿದರು.
ಕೇರಳಕ್ಕೆ ಇಡೀ ದೇಶವೇ ನೆರವು ನೀಡುತ್ತಿದೆ. ಕರ್ನಾಟಕ ರಾಜ್ಯವೂ 10 ಕೋಟಿ ರೂ.ನೆರವು ನೀಡಿದೆ. ಸಿದ್ದಾರ್ಥ ಶಿಕ್ಷಣ ಟ್ರಸ್ಟ್ ಕಳೆದ ವಾರ ಕೊಡಗಿಗೆ 4 ಟ್ರಕ್ಗಳಲ್ಲಿ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಟ್ಟಿತ್ತು. ಇಂದು 9 ಟ್ರಕ್ಗಳಲ್ಲಿ ಕೇರಳಕ್ಕೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿಕೊಡಲಾಗುತ್ತಿದೆ. ಎಂದು ಹೇಳಿದರು.
ರಾಜ್ಯ ಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್, ಪರಮೇಶ್ವರ ಅವರ ಪತ್ನಿ ಕನ್ನಿಕಾ ಪರಮೇಶ್ವರ್ ಮತ್ತಿತರರು ಉಪಸ್ಥಿತರಿದ್ದರು.