ಎನ್‌ಎಸ್ಎಸ್ ಕಡ್ಡಾಯಕ್ಕೆ ಚಿಂತನೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಎಲ್ಲ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ನಲ್ಲಿ ತೊಡಗಿಕೊಳ್ಳಬೇಕೆಂಬ ಉದ್ದೇಶದಿಂದ ಎನ್‌ಎಸ್‌ಎಸ್‌ನನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಷ್ಟ್ರೀಯ ಸೇವಾ ಯೋಜನಾ ಕೋಶ ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

ಎನ್‌ಎಸ್‌ಎಸ್‌ ಗೆ ಹೆಚ್ಚಾಗಿ ಬಡ ಮತ್ತು ಮಧ್ಯಮದ ವರ್ಗದ ವಿದ್ಯಾರ್ಥಿಗಳೇ ಸೇರುತ್ತಾರೆ. ಅನುಕೂಲಸ್ಥ ವಿದ್ಯಾರ್ಥಿಗಳು ಇದರಿಂದ ದೂರು ಉಳಿಯುತ್ತಿದ್ದಾರೆ. ಇವರು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಸಂಸ್ಕಾರ, ಸಂಸ್ಕೃತಿ ನಡವಳಿಕೆಯ ಜ್ಞಾನವಿರಬೇಕು. ಹೀಗಾಗಿ ಎನ್‌ಎಸ್‌ಎಸ್‌ ಕಡ್ಡಾಯಗೊಳಿಸಿದರೆ ಎಲ್ಲರೂ ಪಾಲ್ಗೊಳ್ಳಬೇಕಿರುತ್ತದೆ. ಹಿಂದೆಲ್ಲ ಎನ್‌ಸಿಸಿ ಕಡ್ಡಾಯವಿತ್ತು ಎಂದರು. ಅದೇ ಮಾದರಿಯಲ್ಲಿ ಇದನ್ನೂ ಕಡ್ಡಾಯಗೊಳಿಸಿದರೆ ಉತ್ತಮ‌ ಎಂದು ಅಭಿಪ್ರಾಯಪಟ್ಟರು.

ಎನ್‌ಎಸ್‌ಎಸ್‌ನನ್ನು ಸಂಪೂರ್ಣ ಬದಲಿಸುವ ಅಗತ್ಯವಿದೆ. ಸಭೆಯಲ್ಲಿ ಯುವಕರಿಗೆ ಅನುಕೂಲವಾಗುವ ರೀತಿ ಕ್ರಿಯಾತ್ಮಕ ಸಲಹೆ ಬಂದಿದೆ. ಕಾನೂನು , ಸಂಸ್ಕೃತಿ, ಭವಿಷ್ಯ, ಕೌಶಲ್ಯಾಭಿವೃದ್ಧಿ, ಉದ್ಯೋಗದ ಬಗ್ಗೆ ಎನ್‌ಎಸ್ಎಸ್‌ ನಲ್ಲೇ ಅರಿವು ಮೂಡಿಸುವ ಬಗ್ಗೆ ಸಲಹೆ ಬಂದಿದೆ. ಎನ್‌ಎಸ್‌ಎಸ್‌ನನ್ನು ಬಲಿಷ್ಠಗೊಳಿಸಲು ಸಮಿತಿ ರಚಿಸಿ ಅಂತಿಮ‌ ನಿರ್ಧಾರ ಮಾಡಲಾಗುವುದು ಎಂದರು.‌

ಕೊಡಗಿನ ಜನರ ನೆರವಿಗೆ ಮಂಗಳೂರು‌ ಸೇರಿದಂತೆ ಹತ್ತಿರದ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳು ಧಾವಿಸಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಹಳೇ ವಿದ್ಯಾರ್ಥಿಗಳು ಕೂಡ ವಿವಿಧ ಭಾಗದಿಂದ ತೆರಳಿದ್ದಾರೆ. ಎಲ್ಲ ಕಾಲೇಜು ವಿದ್ಯಾರ್ಥಿಗಳ ಭಾಗವಹಿಸುವಿಕೆ ಬಗ್ಗೆ ವಿಶ್ವವಿದ್ಯಾಲಯ ಕುಲಪತಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಸಭೆಯಲ್ಲಿ ಅಪರ ಮುಖ್ಯಕಾರ್ಯದರ್ಶಿ ಡಾ.ರಜನೀಶ್ ಗೋಯೆಲ್, ರಾಜ್ಯ ಎನ್‌ಎಸ್‌ಎಸ್‌ ಅಧಿಕಾರಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಇದ್ದರು.

ಕೊಡಗು ಮರುನಿರ್ಮಾಣಕ್ಕೆ ರಾಜ್ಯ ಸರಕಾರ ಬದ್ಧ:
ಕೊಡಗು ಮರುನಿರ್ಮಾಣಕ್ಕೆ ರಾಜ್ಯ ಸರಕಾರ ಬದ್ಧವಿದೆ. ಅಲ್ಲಿನ‌ ಅನಾಹುತ, ಹಾನಿ ಬಗ್ಗೆ ಆದ್ಯತೆ ಮೇಲೆ ಸರಿ ಮಾಡಲಾಗುವುದು. ಕೇಂದ್ರ ಸರಕಾರ ಹಣಕಾಸಿನ‌ ನೆರವು ಕೊಟ್ಟಿಲ್ಲ. ನಮ್ಮ ಬಗ್ಗೆ ಅನುಕಂಪವನ್ನೂ ವ್ಯಕ್ತಪಡಿಸಿಲ್ಲ. ಕನಿಷ್ಠ ಪಕ್ಷ ಆತ್ಮಸ್ಥೈರ್ಯವನ್ನಾದರೂ ತುಂಬಿದ್ದರೆ ಅಲ್ಲಿನ ನಿರಾಶ್ರಿತರಿಗೂ ನೆಮ್ಮದಿ ಇರುತ್ತಿತ್ತು. ಆದರೆ ಕೇಂದ್ರ ಸರಕಾರ ಕೇರಳಕ್ಕೆ ಮಾತ್ರ ಹಣಕಾಸಿನ‌ ನೆರವು ನೀಡಿ, ನಮಗೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಷ್ಟದ ಅಂದಾಜು ಕಾರ್ಯ ನಡೆಯುತ್ತಿದೆ. ಬಳಿಕ ಸಹಾಯ ಕೇಳಲಾಗುವುದು ಎಂದರು.

ಎಲ್ಲ ಪೊಲೀಸ್ ಠಾಣೆಯಲ್ಲು ಅಗತ್ಯ ಶಸ್ತ್ರಾಸ್ತ್ರಗಳಿವೆ:
ಪೊಲೀಸ್ ಠಾಣೆಗಳಲ್ಲಿ ಶಸ್ತ್ರಾಸ್ತ್ರ ಕೊರತೆ ಕುರಿತು ಸಿಎಜಿ ವರದಿ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ಎಲ್ಲ ಪೊಲೀಸ್ ಠಾಣೆಯಲ್ಲು ಅಗತ್ಯ ಶಸ್ತ್ರಾಸ್ತ್ರಗಳಿವೆ. ಆದರೂ ಸಿಎಜಿ ವರದಿಯನ್ನು ಗಂಭೀರವಾಗಿ ಪರಿಗಣಿಸಿ, ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದು. ಅಗತ್ಯಬಿದ್ದಲ್ಲಿ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ