ಬಿಡಿಎ ಇನ್ನಷ್ಟು ಪಾರದರ್ಶಕ ಆಡಳಿತ ನೀಡಿಲಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಬಿಡಿಎ ಬಗ್ಗೆ ಜನರಲ್ಲಿರುವ ನಂಬಿಕೆಯನ್ನು ಉಳಿಸಿಕೊಳ್ಳುವ ಜೊತೆಗೆ ಆಡಳಿತ ವೈಖರಿಯನ್ನು ಇನ್ನಷ್ಟು ಪಾರದರ್ಶಕವಾಗಿ ನಡೆಸುವಂತೆ ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಡಿಎ ಅಧಿಕಾರಗಳೊಂದಿಗೆ ಮಂಗಳವಾರ ಬಿಡಿಎ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.

ಬಿಡಿಎ ಸ್ಥಾಪನೆಗೊಂಡ‌ ಉದ್ದೇಶವೇ ಸಂಪೂರ್ಣ ಬದಲಾಗಿದೆ.‌ ಬಡವರು, ಮಧ್ಯಮ ವರ್ಗದ ಜನರಿಗೆ ಮನೆ ನಿರ್ಮಿಸಿಕೊಡುವ ಜವಾಬ್ದಾರಿ ಬಿಡಿಎ ಮೇಲಿತ್ತು. ಇಂದು ಈ ಕೆಲಸಕ್ಕಿಂತ ರಸ್ತೆ , ಮೇಲ್ಸೇತುವೆ ನಿರ್ಮಾಣ, ಕಮರ್ಷಿಕಲ್‌ ಇತರೆ ಕ್ಷೇತ್ರದತ್ತ ವಿಸ್ತರಿಸಿಕೊಂಡಿದೆ.‌ ಇಲ್ಲಿಯೂ ಪಾರದರ್ಶಕ ಆಡಳಿತವಿಲ್ಲ ಎಂಬ ದೂರು ಬರುತ್ತಿದೆ. ಹಿಂದೊಮ್ಮೆ ಬಿಡಿಎ ಮುಚ್ಚುವ ಚರ್ಚೆ ಕೂಡ ನಡೆದಿತ್ತು. ಹೀಗಾಗಿ ಬಿಡಿಎನನ್ನು ಆರೋಗ್ಯಕರ ದಾರಿಯಲ್ಲಿ‌ ನಡೆಸಿಕೊಂಡು ಹೋಗುವಂತೆ ನಿರ್ದೇಶನ ನೀಡಿದರು. ಟೆಂಡರ್‌ದಾರರು ಕಾಮಗಾರಿ ಪೂರ್ಣಗೊಳಿಸುವಲ್ಲಿ ತಡ ಮಾಡಿದರೆ ಮುಲಾಜಿಲ್ಲದೇ ಟೆಂಡರ್ ರದ್ದುಪಡಿಸಿ ಬೇರೆಯವರಿಗೆ ನೀಡಿ. ಯಾವುದೇ ಕಾಮಗಾರಿಯಾದರೂ ಅವಧಿಯೊಳಗೆ ನಡೆಯಬೇಕು, ಅನಗತ್ಯ ವೆಚ್ಚಕ್ಕೆ ಅವಕಾಶ ನೀಡಬೇಡಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಬಿಡಿಎ ಕೈಗೆತ್ತಿಕೊಂಡಿರುವ ಯೋಜನೆಗಳ ವಿವರವನ್ನು ಪಡೆದರು. ಈ ವೇಳೆ ಬಿಡಿಎ ಆಯುಕ್ತ ರಾಕೇಶ್ ಸಿಂಗ್, ಎಸ್‌ಪಿ‌ ಜಗದೀಶ್ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ