ರಾತ್ರಿ 9ರ ಬಳಿಕ ಎಟಿಎಂಗೆ ಹಣ ತುಂಬುವಂತಿಲ್ಲ

ಹೊಸದಿಲ್ಲಿ: ಮುಂದಿನ ವರ್ಷದ ಫೆಬ್ರವರಿಯಿಂದ ನಗರ ಪ್ರದೇಶದ ಯಾವುದೇ ಎಟಿಎಂಗಳಿಗೆ ರಾತ್ರಿ 9 ಗಂಟೆ ಬಳಿಕ ನಗದನ್ನು ತುಂಬುವಂತಿಲ್ಲ. ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿನ ಎಟಿಎಂಗಳಿಗೆ 6 ಗಂಟೆ ಬಳಿಕ ಹಣ ತುಂಬುವಂತಿಲ್ಲ. ಜತೆಗೆ, ಹಣ ಸಾಗಣೆ ವಾಹನಕ್ಕೆ ಇಬ್ಬರು ಸಶಸ್ತ್ರಧಾರಿ ಗಾರ್ಡ್‌ಗಳು ಕಡ್ಡಾಯವಾಗಿ ಇರಲೇ ಬೇಕು ಎಂದು ಗೃಹ ಸಚಿವಾಲಯ ಹೇಳಿದೆ. ಈ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ.

ಅಧಿಸೂಚನೆ ಮುಂದಿನ ವರ್ಷದ ಫೆ.8ರಿಂದ ಜಾರಿಗೆ ಬರಲಿದೆ. ಎಟಿಎಂಗಳಿಗೆ ಹಣ ಸಾಗಿಸುವ ವಾಹನಗಳ ಮೇಲೆ ದಾಳಿ ನಡೆಸಿ ಹಣ ದೋಚುವ ಪ್ರಕರಣಗಳು ಇತ್ತೀಚೆಗೆ ವರದಿಯಾಗಿವೆ. ಜತೆಗೆ, ಎಟಿಎಂ ವಂಚನೆ ಪ್ರಕರಣಗಳೂ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಎಟಿಎಂಗಳಿಗೆ ಹಣ ತುಂಬುವ ಬ್ಯಾಂಕ್‌ಗಳು ಮತ್ತು ಖಾಸಗಿ ಏಜೆನ್ಸಿಗಳಿಗೆ ಹೊಸ ನಿರ್ದೇಶನಗಳನ್ನು ರವಾನಿಸಿದೆ.

ಹೊಸ ಅಧಿಸೂಚನೆ ಪ್ರಕಾರ, ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ ಸಂಜೆ 4 ಗಂಟೆಯ ಒಳಗಾಗಿ ಎಟಿಎಂಗಳಿಗೆ ಹಣವನ್ನು ತುಂಬಬೇಕು. ಎಟಿಎಂಗಳಿಗೆ ಹಣ ಭರ್ತಿ ಮಾಡುವ ಖಾಸಗಿ ಕಂಪನಿಗಳು ಮಧ್ಯಾಹ್ನದೊಳಗೆ ಬ್ಯಾಂಕ್‌ನಿಂದ ಹಣ ಸಂಗ್ರಹಿಸಬೇಕು. ರಾತ್ರಿ ವೇಳೆ ಕೆಲಸ ಮಾಡುವಂತಿಲ್ಲ.

ಕೆಲವು ಸಂದರ್ಭಗಳಲ್ಲಿ ನಗದು ಸಮಸ್ಯೆ 

ನಗದು ಸಮಸ್ಯೆ ತಲೆದೋರಿದಾಗ ಖಾಸಗಿ ಏಜೆನ್ಸಿಗಳು ಎಟಿಎಂಗಳಿಗೆ ಮಧ್ಯರಾತ್ರಿ ಸಮಯದಲ್ಲೂ ಹಣವನ್ನು ತುಂಬುತ್ತಿದ್ದವು. ಹೊಸ ವರ್ಷದಿಂದ ಸರಕಾರದ ಆದೇಶ ಪಾಲನೆಯಾಗಲಿದೆ. ಇದರಿಂದ ಗ್ರಾಹಕರ ನಗದು ವ್ಯವಹಾರಕ್ಕೆ ಅಷ್ಟೇನೂ ತೊಡಕಾಗುವ ಸಾಧ್ಯತೆಗಳಿಲ್ಲ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಎಟಿಎಂನಲ್ಲಿದ್ದ ಪೂರ್ತಿ ನಗದು ಸಂಜೆಯೊಳಗೆ ಖಾಲಿಯಾದರೆ, ಮರುದಿನದ ತನಕ ಗ್ರಾಹಕರು ಕಾಯಬೇಕಾಗಬಹುದು.

8,000 ದೇಶದ ಎಟಿಎಂಗಳಿಗೆ ನಗದು ಭರ್ತಿ ಮಾಡಲು ಬಳಕೆಯಾಗುತ್ತಿರುವ ವಾಹನಗಳ ಸಂಖ್ಯೆ.15,000 ಕೋಟಿ ರೂ. ಬ್ಯಾಂಕ್‌ಗಳ ಪರವಾಗಿ ಎಟಿಎಂಗಳಿಗೆ ಖಾಸಗಿ ಏಜೆನ್ಸಿಗಳು ನಿತ್ಯ ಭರ್ತಿ ಮಾಡುವ ಹಣ

ಹೊಸ ಆದೇಶದಲ್ಲಿ ಏನಿದೆ? 

ನಗದು ಭರ್ತಿ ಮಾಡಲು ಖಾಸಗಿ ಏಜೆನ್ಸಿಗಳಿಗೆ ಗಡುವು ನಿಗದಿ

ಒಂದು ಟ್ರಿಪ್‌ನಲ್ಲಿ 5 ಕೋಟಿ ರೂ. ಮಾತ್ರ ಸಾಗಿಸಬೇಕು

ವಾಹನಕ್ಕೆ ಜಿಪಿಆರ್‌ಎಸ್‌, ಸಣ್ಣ ಸಿಸಿಟಿವಿ, ಇಬ್ಬರು ಭದ್ರತಾ ಸಿಬ್ಬಂದಿ(ಅದರಲ್ಲಿ ಒಬ್ಬ ಚಾಲಕನ ಪಕ್ಕ, ಇನ್ನೊಬ್ಬ ಹಿಂದೆ ಕುಳಿತಿರಬೇಕು), ಒಬ್ಬ ಚಾಲಕ, ಇಬ್ಬರು ಎಟಿಎಂ ಅಧಿಕಾರಿಗಳು ಇರಬೇಕು.

ಹಣ ಭರ್ತಿ ಮಾಡುವಾಗ ಇಲ್ಲವೇ ಖಾಲಿ ಮಾಡುವಾಗ ಪ್ರಕೃತಿಯ ಕರೆ, ಟೀ ಅಥವಾ ಊಟದಕ್ಕೆ ಹೋಗುವಾಗ ಒಬ್ಬ ಗನ್‌ ಮ್ಯಾನ್‌ ಸದಾ ಇರಲೇ ಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ