ಪ್ರವಾಹ ಸಂತ್ರಸ್ತರಿಗೆ ಅಗತ್ಯವಾದ ಎಲ್ಲ ನೆರವನ್ನು ಕೇಂದ್ರ ನೀಡಲಿದೆ; ರಾಷ್ಟ್ರಪತಿ ಅಭಯ

 

ನವದೆಹಲಿ, ಆ.19- ಯೋಧರ ನಾಡು ಕೊಡಗು ಮತ್ತು ದೇವರನಾಡು ಕೇರಳದಲ್ಲಿ ಜಲಪ್ರಳಯದಿಂದ ಕಂಗಾಲಾಗಿರುವ ರಾಜ್ಯದ ಸಂತ್ರಸ್ತರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ ಅಭಯ ನೀಡಿ, ಇಡೀ ದೇಶದ ಜನತೆ ನಿಮ್ಮ ನೆರವಿಗೆ ಇದ್ದಾರೆ. ಅಗತ್ಯವಾದ ಎಲ್ಲ ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ನೈತಿಕ ಸ್ಥೈರ್ಯ ತುಂಬಿದ್ದಾರೆ.

ಕರ್ನಾಟಕದ ಕೊಡುಗು ಮತ್ತು ಕೇರಳ ರಾಜ್ಯದಲ್ಲಿ ಭಾರೀ ಮಳೆ, ಪ್ರವಾಹ, ಹಾಗೂ ಭೂಕುಸಿತದಿಂದ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟ ಹಾಗೂ ಅಲ್ಲಿನ ಪರಿಸ್ಥಿತಿ ಬಗ್ಗೆ ಎರಡು ರಾಜ್ಯಗಳ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಂದ ರಾಷ್ಟಪತಿ ಮಾಹಿತಿ ಪಡೆದರು.
ರಾಜ್ಯಪಾಲ ವಿ.ಆರ್.ವಾಲಾ ಮತ್ತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಇಂದು ಬೆಳಗ್ಗೆ ದೂರವಾಣಿ ಮೂಲಕ ಮಾತನಾಡಿದ ಕೋವಿಂದ್ ಪ್ರವಾಹ ಪರಿಸ್ಥಿತಿಯ ವಿವರ ಪಡೆದರು.

ಕೊಡುಗ ಜಿಲ್ಲೆಯಲ್ಲಿ ಸಂಭವಿಸಿರುವ ಶತಮಾನದಲ್ಲೇ ಕಂಡು ಕೇಳರಿಯದ ಜಲ ಪ್ರಳಯದ ಬಗ್ಗೆ ರಾಷ್ಟ್ರಪತಿ ಅವರಿಗೆ ವಿವರಿಸಿದ ಕುಮಾರಸ್ವಾಮಿ, ನೆರೆ ಪೀಡಿತ ಪ್ರದೇಶಗಳಲ್ಲಿ ಯೋಧರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣೆ ದಳದ ಸಿಬ್ಬಂದಿ ಸಮರೋಪಾದಿಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಂಡಿದ್ದಾರೆ. ಅಪಾಯದಲ್ಲಿದ್ದ 3,500ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದು, ಪರಿಹಾರ ಕಾರ್ಯ ಮುಂದುವರಿದಿದೆ ಎಂದು ಅವರು ತಿಳಿಸಿದರು.
ಕೊಡುಗು ಪರಿಸ್ಥಿತಿ ಬಗ್ಗೆ ವಿಚಾರಿಸಿ ಅಭಯ ನೀಡಿರುವ ರಾಷ್ಟ್ರಪತಿ ಅವರಿಗೆ ಕುಮಾರಸ್ವಾಮಿ ಕೃತಜ್ಞತೆ ಸಲ್ಲಿಸಿದ್ದಾರೆ.
ಇದೇ ವೇಳೆ ಕೋವಿಂದ್ ಅವರು ಕೇರಳ ರಾಜ್ಯಪಾಲ ಪಿ.ಸತ್ಯಶಿವನ್ ಹಾಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿ ಮುಖೇನ ಮಾತನಾಡಿ ರಾಜ್ಯದ ಜಲಪ್ರಳಯದ ಪರಿಸ್ಥಿತಿ ವಿವರ ಪಡೆದು ಕೇಂದ್ರ ಸರ್ಕಾರ ನಿಮ್ಮ ನೆರವಿಗಿದೆ ಎಂದು ಅಭಯ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ