ಶಿರಾಡಿಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ ಪ್ರಕರಣ: 6 ದಿನಗಳ ಬಳಿಕ ಚಾಲಕನ ಶವ ಪತ್ತೆ

ಹಾಸನ:ಆ-19: ಶಿರಾಡಿಘಾಟ್ ನಲ್ಲಿ ಟ್ಯಾಂಕರ್ ಪಲ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸತತ ಆರು ದಿನಗಳ ಕಾರ್ಯಾಚರಣೆ ನಂತರ ಚಾಲಕನ‌ ಮೃತ ದೇಹ ಪತ್ತೆಯಾಗಿದೆ.

ಆ.14 ರಂದು ರಾತ್ರಿ ದೊಡ್ಡತಪ್ಪಲು ಬಳಿ ಗುಡ್ಡ ಕುಸಿದ ಪರಿಣಾಮ ಟ್ಯಾಂಕರ್ ಹಳ್ಳಕ್ಕೆ ಬಿದ್ದಿತ್ತು. ಭಾರೀ ಮಳೆ ಹಾಗೂ ಗುಡ್ಡ ಕುಸಿತದಿಂದಾಗಿ ಶವ ಹೊರತೆಗೆಯಲು ಅಡ್ಡಿಯುಂಟಾಗಿತ್ತು. ಟ್ಯಾಂಕರ್ ಕ್ಲೀನರ್ ಶವ ಎರಡು ದಿನಗಳ ನಂತರ ಹೊರತೆಗೆಯಲಾಗಿತ್ತು. ಆದರೆ 6 ದಿನಗಳಾದರೂ ಚಾಲಕ ಸಂತೋಷ್ ಶವ ಪತ್ತೆಯಾಗಿರಲಿಲ್ಲ. ಸಂತೋಷ್ ಕೆ.ಆರ್.ಪೇಟೆ ತಾಲ್ಲೂಕಿನ ಆನೆಗೋಳ ಗ್ರಾಮದ ನಿವಾಸಿಯಾಗಿದ್ದರು.

ಶುಕ್ರವಾರ ಸಂತೋಷ್ ಕುಟುಂಬಸ್ಥರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಡಿಸಿ ರೋಹಿಣಿ ಸಿಂಧೂರಿ ಕಾಲಿಗೆ ಬಿದ್ದು ತನ್ನ ಪತಿಯ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದರು. ಈಗ ಚಾಲಕನ ಶವವನ್ನು ಹೊರ ತೆಗೆಯಲಾಗಿದ್ದು, ಶವ ಸಂಪೂರ್ಣ ಕೊಳೆತುಹೋಗಿದೆ.

ಸಂತೋಷ್ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ