ಭೀಕರ ಅಪಘಾತ: ನಟ-ನಿರ್ದೇಶಕ ಹೇಮಂತ್ ಕುಮಾರ್ ದುರ್ಮರಣ

ಬೆಂಗಳೂರು: ಕಿರು ಚಿತ್ರ ನಿರ್ದೇಶಕ, ನಟ 32 ವರ್ಷದ ವಿಶೇಷ ಚೇತನ ಹೇಮಂತ್ ಕುಮಾರ್ ಎಂಬುವರು ನೆಲಮಂಗಲದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ.
ಕಳೆದ ರಾತ್ರಿ ನೆಲಮಂಗಲದ ಸಂಚಾರಿ ಪೊಲೀಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಹೇಮಂತ್ ಕುಮಾರ್ ಸ್ಧಳದಲ್ಲೇ ದುರ್ಮರಣ ಹೊಂದಿದ್ದು ಆತನ ಸ್ನೇಹಿತ ವೀರೇಂದ್ರ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೇಮಂತ್ ಕುಮಾರ್ ನಗರದ ಮಾಗಡಿ ರಸ್ತೆಯ ಮಾಚೋಹಳ್ಳಿಯ ನಿವಾಸಿಯಾಗಿದ್ದರು. ಹೇಮಂತ್ ಕೆಲ ಕನ್ನಡದ ಕಿರು ಚಿತ್ರಗಳನ್ನು ನಿರ್ದೇಶಿಸಿ ನಟಿಸಿದ್ದಾರೆ. ಹೇಮಂತ್ ಅವರಿಗೆ ಎರಡೂ ಕೈಗಳು ಇರಲಿಲ್ಲ. ಹೀಗಾಗಿ ಬೈಕ್ ಅನ್ನು ಸ್ನೇಹಿತ ವೀರೇಂದ್ರ ಚಲಾಯಿಸುತ್ತಿದ್ದರು.
ನೆಲಮಂಗಲದ ವಿರಾಂಜನಿಪುರದ ಬಳಿ ಬರುತ್ತಿದ್ದಾಗ ವೀರೇಂದ್ರ ಬೈಕ್ ನಿಯಂತ್ರಣ ಕಳೆದುಕೊಂಡಿದ್ದಾರೆ. ವೇಗವಾಗಿ ಬರುತ್ತಿದ್ದರಿಂದ ಬೈಕ್ ರಸ್ತೆ ವಿಭಜಕಕ್ಕೆ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರು ರಸ್ತೆ ಮೇಲೆ ಬಿದ್ದಿದ್ದು ಹೇಮಂತ್ ಕುಮಾರ್ ಅವರ ತಲೆಗೆ ಬಲವಾದ ಗಾಯವಾಗಿದ್ದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದು ಗಂಭೀರವಾಗಿ ಗಾಯಗೊಂಡಿರುವ ವೀರೇಂದ್ರ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ